ಹುಬ್ಬಳ್ಳಿ: ಯಾವುದೇ ಧರ್ಮವನ್ನು ವಿಭಜನೆ ಮಾಡುವ ಪ್ರಯತ್ನನ್ನು ನಾನು ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಗರದಲ್ಲಿ ನಡೆದ ವೀರಶೈವ, ಲಿಂಗಾಯತ ಸಮಾವೇಶದಲ್ಲಿ ಕೇಳಿ ಬಂದಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಈ ವರೆಗೂ ಐದು ಅರ್ಜಿಗಳು ಬಂದಿವೆ. ಒಬ್ಬೊಬ್ಬರದ್ದು ಒಂದೊಂದು ಬೇಡಿಕೆ ಇದೆ. ಎಲ್ಲಾ ಅರ್ಜಿಗಳನ್ನು ಆಯೋಗಕ್ಕೆ ಕಳುಹಿಸಿದ್ದೇನೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ ಎಂದು ತಿಳಿಸಿದ್ದಾರೆ.
ವೀರಶೈವ/ಲಿಂಗಾಯತ ಧರ್ಮಗಳು ಸಂಖ್ಯಾತ್ಮಕವಾಗಿ ಬಲಿಷ್ಟವಾಗಿರುವ ಹಾಗೂ ರಾಜಕೀಯ ಪ್ರಭಾವವನ್ನು ಹೊಂದಿರುವ ಸಮುದಾಯವಾಗಿದೆ. ವೀರಶೈವ ಮಹಾಸಭಾ ನಾಯಕರು ತಮಗೆ ಪ್ರತ್ಯೇಕ ಧರ್ಮ ಬೇಕೆಂದು ಹೇಳುತ್ತಾರೆ. ಆದರೆ, ಅದು ವೀರಶೈವ-ಲಿಂಗಾಯತ ಧರ್ಮವಾಗಿದೆ. ಇನ್ನು ಲಿಂಗಾಯತರು ತಮಗೆ ಪ್ರತ್ಯೇಕ ಧರ್ಮ ಬೇಕೆಂದು ಹೇಳುತ್ತಾರೆ, ಆಗ್ರಹಗಳು ಹೀಗಿರುವಾಗ ನಾನೇನು ಮಾಡಲು ಸಾಧ್ಯ? ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಸರ್ಕಾರ ಜವಾಬ್ದಾರಿಯುತವಾಗಿ ಸ್ವೀಕರಿಸಿದ್ದು, ಅರ್ಜಿಗಳನ್ನು ಈಗಾಗಲೇ ಆಯೋಗಕ್ಕೆ ಸಲ್ಲಿಕೆ ಮಾಡಿದ್ದೇವೆ. ಆಯೋಗ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.