ಬೆಂಗಳೂರು: ವೈಕುಂಠ ಏಕಾದಶಿ ನಿಮಿತ್ತ ದೇಶಾದ್ಯಂತ ವೆಂಕಟೇಶ್ವರ ಸ್ವಾಮಿ ದೇಗುಲಗಳಲ್ಲಿ ಭಾರಿ ಪ್ರಮಾಣದಲ್ಲಿ ಭಕ್ತರು ಶ್ರೀನಿವಾಸನ ದರ್ಶನ ಪಡೆಯುತ್ತಿದ್ದು, ಖ್ಯಾತ ಧಾರ್ಮಿಕ ಕೇಂದ್ರ ತಿರುಮಲದಲ್ಲೂ ಭಾರಿ ಪ್ರಮಾಣದಲ್ಲಿ ಭಕ್ತರು ಮಧ್ಯರಾತ್ರಿಯಿಂದಲೇ ಬಾಲಾಜಿ ದರ್ಶನ ಆರಂಭಿಸಿದ್ದಾರೆ.
ಇನ್ನು ಬೆಂಗಳೂರಿನಿ ವೈಯಾಲಿಕಾವಲ್, ಜೆಪಿನಗರ, ಕೋಟೆ ವೆಂಕಟರಮಣ ದೇಗುಲ ಮತ್ತು ಸಿರ್ಸಿ ವೃತ್ತದಲ್ಲಿರುವ ಶ್ರೀನಿವಾಸ ದೇಗುಲಗಳಲ್ಲಿ ಮುಂಜಾನೆಯಿಂದಲೇ ದರ್ಶನ ಸೇವೆ ಆರಂಭಿಸಲಾಗಿದ್ದು, ಲಕ್ಷಾಂತರ ಮಂದಿ ಭಕ್ತರು ಶ್ರೀನಿವಾಸನ ದರ್ಶನ ಪಡೆಯುತ್ತಿದ್ದಾರೆ. ಇದಲ್ಲದೆ ಬೆಂಗಳೂರಿನ ಇಸ್ಕಾನ್, ತಿರುಪತಿ ತಿರುಮಲ ದೇವಸ್ತಾನಂ, ವೆಂಕಟೇಶ್ವರ ದೇಗುಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ವೈಕುಂಠ ಏಕಾದಶಿಯಾಗಿದ್ದು, ಇಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಇಂದು ಶ್ರೀನಿವಾಸ ದರ್ಶನ ಪಡೆದರೆ ಪಾಪ ಪರಿಹಾರವಾಗಿ ಶ್ರೀನಿವಾಸನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಇದೇ ಕಾರಣಕ್ಕೆ ವೈಕುಂಠ ಏಕಾದಶಿ ದಿನದಂದು ಲಕ್ಷಾಂತರ ಮಂದಿ ಭಕ್ತರು ಶ್ರೀನಿವಾಸನ ದರ್ಶನ ಪಡೆಯುತ್ತಾರೆ. ಇನ್ನು ವೆಂಕಟೇಶ್ವರನ ದಿವ್ಯ ಸನ್ನಿಧಿ ತಿರುಮಲ ದೇಗುಲದಲ್ಲಿ ಕಳೆದ ಮೂರು ದಿನಗಳಿಂದಲೇ ಭಕ್ತರ ಸಂದಣಿ ಹೆಚ್ಚಾಗಿದ್ದು, ಮಧ್ಯರಾತ್ರಿಯಿಂದಲೇ ಭಾರಿ ಪ್ರಮಾಣದಲ್ಲಿ ಭಕ್ತರು ಶ್ರೀನಿವಾಸನ ದರ್ಶನ ಪಡೆಯುತ್ತಿದ್ದಾರೆ.
ಇನ್ನು ಮೈಸೂರಿನ ವೈಷ್ಣವ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಕೈಗೊಳ್ಳಲಾಗುತ್ತಿದ್ದು, ದೇಗುಲಗಳಲ್ಲಿ ವೈಕುಂಠ ದ್ವಾರ ತೆರೆಯಲಾಗಿದೆ. ಭಕ್ತರು ಈ ದ್ವಾರದ ಮೂಲಕ ಹಾದುಹೋಗಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಇನ್ನು ಇದೇ ಉತ್ಸವ ಮೂರ್ತಿಗಳನ್ನು ವೈಕುಂಠ ದ್ವಾರದಲ್ಲಿಟ್ಟು ಪೂಜೆ ಮಾಡಲಾಗುತ್ತಿದೆ. ಅಂತೆಯೇ ಮೇಲುಕೋಟೆ ಚೆಲುವ ನಾರಾಯಣ ದೇಗುಲದಲ್ಲೂ ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos