ರಾಜ್ಯ

ಐಐಎಸ್'ಸಿ ಶ್ರೀಗಂಧ ಮರಗಳ್ಳತನ ಪ್ರಕರಣ: ಭದ್ರತಾ ಸಿಬ್ಬಂದಿಗಳ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

Manjula VN

ಬೆಂಗಳೂರು: ನಗರದ ಸಿ.ವಿ.ರಾಮನ್ ರಸ್ತೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಎಸ್'ಸಿ ಭದ್ರತಾ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಸಿ.ವಿ. ರಾಮನ್ ರಸ್ತೆಯ ಅರಣ್ಯ ಭವನದ ಹತ್ತಿರದಲ್ಲೇ ಇರುವ ಭಾರತೀಯ ವಿಜ್ಞಾನ ಸಂಸ್ಥೆ ಬಳಿ ಬಂದಿದ್ದ ಅನಾಮಧೇಯ ಕಳ್ಳರ ಗುಂಪೊಂದು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ಮಾಡಿತ್ತು, ಭದ್ರತಾ ಸಿಬ್ಬಂದಿಗಳನ್ನು ಕಟ್ಟಿ ಹಾಕಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿತ್ತು.

 ಭದ್ರತಾ ಸಿಬ್ಬಂದಿಗಳಾದ ಬಿಬುಥಿ ನಾಯಕ್ ಮತ್ತು ಕೌಶಿಕ್ ಸಿಯಾಲ್ ಎಂಬುವವರನ್ನು ಕಳ್ಳರು ಕಟ್ಟಿಹಾಕಿ ಹೊಡೆದಿದ್ದರು. ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಶಂಕಿತ ವ್ಯಕ್ತಿಯೊಬ್ಬನನ್ನು ವಿಚಾರಣೆಗೊಳಪಡಿಸಲಾಗಿದೆ. ಸಂಸ್ಥೆಯ ಒಳಿಗಿನ ವ್ಯಕ್ತಿಗಳೇನಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಈ ವರೆಗೂ ನಮಗೆ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಹೀಗಾಗಿ ಆರೋಪಿಗಳನ್ನು ಹಿಡಿಯುವುದು ವಿಳಂಬವಾಗಬಹುದು. ಗಣರಾಜ್ಯೋತ್ಸವ ದಿನಕ್ಕೆ ಇನ್ನು ಎರಡು ದಿನಗಳೇ ಬಾಕಿಯಿದ್ದು, ಹೀಗಾಗಿ ಪ್ರಸ್ತುತ ನಾವು ಭದ್ರತೆ ನೀಡುವುದರಲ್ಲ ಕಾರ್ಯನಿರತರಾಗಿದ್ದೇವೆಂದು ಹೇಳಿದ್ದಾರೆ.

ಘಟನೆ ಕುರಿತಂತೆಮಾತನಾಡಿರವ ಐಐಎಸ್ ಸಿ ಹಿರಿಯ ಭದ್ರತಾಧಿಕಾರಿ ಎಂ.ಆರ್. ಚಂದ್ರಶೇಖರ್ ಅವರು, ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಭದ್ರತೆ ಹೆಚ್ಚಿಸುವ ಕುರಿತಂತೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಲು ಕೆಲ ತಿಂಗಳ ಹಿಂದಷ್ಟೇ ವಿಶೇಷ ಸಮಿತಿಯನ್ನು ರಚಿಸಲಾಗಿತ್ತು. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ ಈಗಾಗಲೇ ಸಮಿತಿ ಶಿಫಾರಸನ್ನು ಕಳುಹಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ಪೊಲೀಸರಿಗೆ ಸಹಕಾರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT