ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕೋಮುಗಲಭೆ ವಿರುದ್ಧ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಟ್ವಿಟರ್ ನಲ್ಲಿ ಬರ್ನಿಂಗ್ ಕರ್ನಾಟಕ ಹ್ಯಾಶ್ ಟ್ಯಾಗ್ ಬಳಸಿ ರಾಜ್ಯ ಸರ್ಕಾರದ ವಿರುದ್ಧ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವಾರದಿಂದ ನಡೆಯುತ್ತಿರುವ ಕೋಮುಗಲಭೆಯನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರದ ವೈಫಲ್ಯವನ್ನು ಟ್ವಿಟರ್ ಬಳಕೆದಾರರು ಟೀಕಿಸಿದ್ದು, ಟ್ವಿಟಿಗರ ಜೊತೆಗೆ ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೂ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ವೈಫಲ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾಜಿ ಸಚಿವ ಸಿಟಿ ರವಿ, ಸಹ ಸಿಎಂ ವಿರುದ್ಧ ಟ್ವಿಟರ್ ನಲ್ಲಿ ಕಿಡಿ ಕಾರಿದ್ದು, ಬೌದ್ಧಿಕ ದಿವಾಳಿತನಕ್ಕೊಳಗಾದ ಮುಖ್ಯಮಂತ್ರಿಗಳ ಆಳ್ವಿಕೆಯಲ್ಲಿ ಮಾತ್ರ ಓರ್ವ ಕೊಲೆಯಾದವನಿಗೆ ಧರ್ಮ ಇರುತ್ತದೆ, ಆದರೆ ಕೊಲೆ ಮಾಡಿದ ವ್ಯಕ್ತಿಗೆ ಯಾವುದೇ ಧರ್ಮ ಇಲ್ಲದಿರುವುದು ಸಾಧ್ಯ ಎಂದಿದ್ದಾರೆ.
ಇನ್ನು ಬಿಜೆಪಿ ನಾಯಕರ ಟ್ವೀಟ್ ಗಳಿಗೆ ಕಾಂಗ್ರೆಸ್ ಡಿಜಿಟಲ್ ಕಮ್ಯುನಿಕೇಷನ್ ನ ಸದಸ್ಯರಾಗಿರುವ ಗೌರವ್ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರದ ನಂತರ ಮತ ಧೃವೀಕರಣಕ್ಕಾಗಿ ಬಿಜೆಪಿ ಕರ್ನಾಟಕವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.