ಯುಪಿಎಸ್ ಸಿ ಸಾಧಕರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸುತ್ತಿರುವುದು ರಾಜಕೀಯ ಕಾರಣ ಎಂದು ಕೆಲವರು ಹೇಳುತ್ತಿದ್ದರೂ ಕೂಡ ಯುಪಿಎಸ್ ಸಿಯಲ್ಲಿ ಟಾಪರ್ಸ್ ಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಮೇಲೆ ಪ್ರೀತಿ ತೋರಿಸಿ ಮುಖ್ಯಮಂತ್ರಿ ಮೆಚ್ಚುಗೆ ಪಡೆದರು.
ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಇಲ್ಲಿಯವರೆಗೆ ರಾಜ್ಯದ 59 ಮಂದಿ ಟಾಪರ್ಸ್ ಗಳಾಗಿ ಹೊರಹೊಮ್ಮಿದ್ದು, ಅವರಲ್ಲಿ 21 ಮಂದಿ ಅಭ್ಯರ್ಥಿಗಳು ಕನ್ನಡವನ್ನು ಮುಖ್ಯ ಪರೀಕ್ಷೆಯಾಗಿ ಓದಿದವರು. ಮತ್ತು 5 ಮಂದಿ ಕನ್ನಡ ಮಾಧ್ಯಮದಿಂದ ಬಂದವರು.
ಈ ವರ್ಷದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡತಿ ನಂದಿನಿ ಟಾಪರ್ ಆಗಿದ್ದು ನಮಗೆ ಹೆಮ್ಮೆಯ ವಿಷಯ. ದೃಷ್ಟಿ ನ್ಯೂನತೆ ಹೊಂದಿರುವ ಕೆಂಪಹೊನ್ನಯ್ಯ 340ನೇ ರ್ಯಾಂಕ್ ಗಳಿಸಿದ್ದು ಅವರು ಕೂಡ ನಮ್ಮ ರಾಜ್ಯದವರು. ಅದು ನಮಗೆ ಸಂತಸದ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಬೇಕು. ಕನ್ನಡ ಆಡಳಿತ ಭಾಷೆಯಾಗಿ ಜಾರಿಯಾಗುವುದನ್ನು ನೋಡಿಕೊಳ್ಳಲು ಕನ್ನಡ ಕಾವಲು ಸಮಿತಿಯನ್ನು ರಚಿಸಿದ್ದು, ನಾವದನ್ನು ಸರಿಯಾಗಿ ಗೌರವಿಸಿ ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು.
ಜನತಾ ಪಕ್ಷ ಕರ್ನಾಟಕದಲ್ಲಿ ಆಡಳಿತದಲ್ಲಿದ್ದಾಗ ಸಿದ್ದರಾಮಯ್ಯನವರು ಅದಕ್ಕೆ ಮೊದಲ ಅಧ್ಯಕ್ಷರಾದರು. ಕರ್ನಾಟಕಕ್ಕೆ ಬಂದಿದ್ದ ಒಬ್ಬ ಐಎಎಸ್ ಅಧಿಕಾರಿ ಕನ್ನಡ ಭಾಷೆಯನ್ನು ಕಲಿಯಲು ನಿರಾಕರಿಸಿದರು. ನಂತರ ಅವರನ್ನು ಬೇರೆ ರಾಜ್ಯಕ್ಕೆ ಕಳುಹಿಸಲಾಯಿತು. ಐಎಎಸ್ ಅಧಿಕಾರಿಯಾಗಿ ನೀವು ಯಾವ ರಾಜ್ಯಕ್ಕೆ ನೇಮಕವಾಗಿ ಹೋಗುತ್ತೀರೋ ಅಲ್ಲಿನ ಭಾಷೆಯನ್ನು ಕಲಿಯಿರಿ. ನಂದಿನಿಯವರು ಕೂಡ ಯುಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡಿರುವುದು ಕನ್ನಡ ಭಾಷೆ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಲ್ಲರೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಒಲವಿನ ಬಗ್ಗೆ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಂದಿನಿಗೆ 1 ಲಕ್ಷ ರೂಪಾಯಿ ನೀಡಲಿದ್ದು, ಕನ್ನಡ ಮಾಧ್ಯಮದಲ್ಲಿ ಬರೆದವರಿಗೆ 1 ಲಕ್ಷ ರೂಪಾಯಿ, ಕನ್ನಡವನ್ನು ಆಯ್ಕೆ ವಿಷಯವಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ 50,000 ರೂಪಾಯಿ ನೀಡಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos