ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ಕೇಸ್ ವಿಚಾರಣೆ ನಡೆಸುತ್ತಿದ್ದ ಸಾರ್ವಜನಿಕ ವಿಶೇಷ ಅಭಿಯೋಜಕರನ್ನು ಕೇಸ್ ನಿಂದ ತೆಗೆದು ಹಾಕಲಾಗಿದೆ.
ಸಂತ್ರಸ್ತೆ ಪೋಷಕರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟ ಕಾರಣ ವಕೀಲ ನರಸಪ್ಪ ಅವರನ್ನು ಕೇಸ್ ನಿಂದ ತೆಗೆದುಹಾಕಲಾಗಿದೆ. 2015ರ ನವೆಂಬರ್ ನಲ್ಲಿ ನಡೆದಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣದ ಕೇಸ್ ವಿಚಾರಣೆ ಮಾಡಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಪ್ರತಿನಿಧಿಯಾಗಿ ವಕೀಲ ಎಂ ನರಸಪ್ಪ ಅವರನ್ನು ನೇಮಿಸಲಾಗಿತ್ತು.
ಕೇಸ್ ನ ಪ್ರತಿ ವಿಚಾರಣೆಗೆ ಸಂತ್ರಸ್ತೆ ಪೋಷಕರು ಹಾಜರಾದ ವೇಳೆ ಲಂಚಕ್ಕಾಗಿ ಒತ್ತಾಯಿಸುತ್ತಿದ್ದರು. ಆರೋಪಿಗೆ ಜಾಮೀನು ಸಿಗದಂತೆ ಮಾಡಲು ವಿರೋಧ ವ್ಯಕ್ತ ಪಡಿಸಲು ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದರು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದ್ದಾರೆ.
ಸಂತ್ರಸ್ತೆ ಪೋಷಕರು ಮಕ್ಕಳ ಹಕ್ಕು ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಸಾಕ್ಷಿ ಜೊತೆ ದೂರನ್ನು ಸರ್ಕಾರದ ಕಾನೂನು ಇಲಾಖೆಗದೆ ಕಳುಹಿಸಲಾಗಿತ್ತು , ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 23 ರಂದು ಸಂತ್ರಸ್ತೆ ಪೋಷಕರು ದೂರು ದಾಖಲಿಸಿದ್ದರು.ಮೇ 11 ರಂದು ತನಿಖೆ ನಡೆಸಿ ನರಸಪ್ಪ ಅವರನ್ನು ತೆಗೆದುಹಾಕಲು ಆದೇಶಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಇಲಾಖೆಯ ಉಪ ನಿರ್ದೇಶಕ ಆರ್ ಎನ್ ಲಮಾಣಿ ಹೇಳಿದ್ದಾರೆ.
ನರಸಪ್ಪ ವಿರುದ್ಧ ಒಂದು ದೂರು ದಾಖಲಾಗಿತ್ತು, ಹೀಗಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರವನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬ ಈ ರೀತಿ ನಡೆದುಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ವಸುದೇವ ಶರ್ಮಾ ಹೇಳಿದ್ದಾರೆ.
8 ವರ್ಷದ ಬಾಲಕಿ ಮೇಲೆ ಸಂಬಂಧಿಕನೊಬ್ಬ ಆಕೆಯ ನಿವಾಸದಲ್ಲೇ ಆಕೆಗೆ ಸುಮಾರು 1 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದ. ನವೆಂಬರ್ 19 2015 ರಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. 2014 ರಿಂದ 2015ನವೆಂಬರ್ ನಡುವೆ ಕಿರುಕುಳ ನೀಡಲಾಗಿತ್ತು. ಟ್ಯೂಷನ್ ಹೇಳಿಕೊಡುವ ನೆಪದಲ್ಲಿ ಮನೆಗೆ ಬರುತ್ತಿದ್ದ 24 ವರ್ಷದ ಆಕೆಯ ಸಂಬಂಧಿ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಜೊತೆಗೆ ಆಕೆಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಬಾಲಕಿ ತುಂಬಾ ಸುಸ್ತಾಗುತ್ತಿದ್ದನ್ನು ಗಮನಿಸಿದ ಪೋಷಕರು ಆಕೆಯನ್ನು ವಿಚಾರಿಸಿದಾಗ ಬಾಲಕಿ ಎಲ್ಲವನ್ನು ವಿವರಿಸಿದ್ದಾಳೆ. ನಂತರ ಪೋಷಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos