ಮೈಸೂರು: ಗಗನಚುಕ್ಕಿ ಜಲಪಾತದ ನೀರು ನಿನ್ನೆ ಅಪಾಯದ ಮಟ್ಟ ಮೀರಿದ್ದರಿಂದ ತಮಿಳುನಾಡಿನ ಐವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ತಮಿಳುನಾಡು ಮೂಲದ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ ಪಿಕ್ ನಿಕ್ ಗೆಂದು ಗಗನಚುಕ್ಕಿಗೆ ಬಂದಿದ್ದರು. ನದಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಆದರೆ ಒಂದು ಹಂತದಲ್ಲಿ ನದಿಯ ನೀರು ಅಪಾಯದ ಮಟ್ಟ ಮೀರಿತು. ಆಗ ನಿಜಕ್ಕೂ ಈ ಐವರು ದಿಗಿಲುಗೊಂಡರು. ಕ್ಷಣಮಾತ್ರದಲ್ಲಿ ನದಿಯಲ್ಲಿದ್ದ ಬಂಡೆಯೊಂದಕ್ಕೆ ಹತ್ತಿದರು. ನದಿಯ ನೀರು ಬಂಡೆಯವರೆಗೆ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತಾ ಆ ಬಂಡೆಯಲ್ಲಿಯೇ 2 ಗಂಟೆಗೂ ಹೆಚ್ಚು ಕಾಲ ತಂಗಿದ್ದರು. ಆಗ ಗ್ರಾಮಸ್ಥರು ಅವರನ್ನು ನೋಡಿ ಏಣಿಯನ್ನು ನದಿಯ ಬಂಡೆಗೆ ಇಟ್ಟು ಆ ಮೂಲಕ ಹತ್ತಿರದ ಬಂಡೆಗೆ ಹೋಗಿ ನದಿ ದಡಕ್ಕೆ ತಲುಪುವಲ್ಲಿ ಯಶಸ್ವಿಯಾದರು.
ಸಾವಿನ ದವಡೆಯಿಂದ ರಕ್ಷಿಸಿದ ಗ್ರಾಮಸ್ಥರಿಗೆ ತಮಿಳುನಾಡಿನ ಪ್ರವಾಸಿಗರು ಧನ್ಯವಾದ ಹೇಳಿದರು.