ಬೆಂಗಳೂರು: 'ನಮ್ಮ ಮೋಟ್ರೋ'ದಲ್ಲಿ ನಾಮಫಲಕದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರಕ್ಕೆ ಖಡಕ್ ಪತ್ರವೊಂದನ್ನು ಬರೆದಿದ್ದಾರೆ.
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕುರಿದಂತೆ ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕನ್ನಡ ನಾಡು, ನುಡಿ ವಿಚಾರಗಳು ಭಾವನಾತ್ಮಕ ವಿಚಾರಗಳಾಗಿವೆ. ಕನ್ನಡಿಗರ ಭಾವನೆಗಳಿಗೆ ಗೌರವ ನೀಡಲು ಕೂಡಲೇ ಮೆಟ್ರೋ ನಾಮಫಲಕಗಳಿಂದ ಹಿಂದಿ ತೆಗೆಸಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಇರುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ವಿರುದ್ಧ ನಿತ್ಯ ಒಂದಲ್ಲ ಒಂದು ಹೋರಾಟ ನಡೆಯುತ್ತಲೇ ಇದೆ. ಇದು ಭಾವನಾತ್ಮಕ ವಿಚಾರವಾಗಿರುವ ಕಾರಣ ಕೇಂದ್ರ ಸರ್ಕಾರ ಕೂಡಲೇ ಮೆಟ್ರೋ ನಾಮಫಲಕಗಳು ಮತ್ತು ಸೂಚನಾ ಫಲಕಗಳಲ್ಲಿ ಹಿಂದಿಯನ್ನು ತೆಗೆಯಬೇಕು. ಯಾವದೇ ಕಾರಣಕ್ಕೂ ಮೋಟ್ರೋದಲ್ಲಿ ಹಿಂದಿ ಹೇರಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಮೆಟ್ರೋ (ಬಿಎಂಆರ್'ಸಿಎಲ್) ಯೋಜನೆಯಲ್ಲಿ ಕೇಂದ್ರಕ್ಕೆ ಸಮನಾಗಿ ಶೇ.50 ರಷ್ಟು ಪಾಲನ್ನು ಹೊಂದಿದೆ. ಹಾಗೆಯೇ ಕೇಂದ್ರಕ್ಕಿಂತ ಹೆಚ್ಚಿನ ಹಣಕಾಸು ಮತ್ತು ಇತರ ಹೊಣೆಗಾರಿಕೆಗಳನ್ನು ಹೊಂದಿರುವ ಕಾರಣ ಮೆಟ್ರೋದಲ್ಲಿ ರಾಜ್ಯ ಭಾಷೆ ಕನ್ನಡಕ್ಕೆ ಆದ್ಯತೆ ಸಿಗಬೇಕಿದೆ. ಇದನ್ನು ಅರ್ಥ ಮಾಡಿಕೊಂಡು ಕೂಡಲೇ ಫಲಕಗಳನ್ನು ಬದಲಿಸಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಬಳಸಿ ಪುನರ್ ವಿನ್ಯಾಸಗೊಳಿಸಬೇಕು. ಕನ್ನಡಿಗರ ಈ ಕೋರಿಕೆಯನ್ನು ಮನ್ನಿಸುತ್ತೀರಿ ಎಂಬು ನಂಬಿದ್ದೇನೆ ಎನ್ನುವ ವಿಶ್ವಾಸದ ಮಾತುಗಳನ್ನು ಸಿದ್ದರಾಮಯ್ಯ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.