ನವಲಗುಂದ: ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಮಹದಾಯಿ ನದಿ ನೀರು ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರು ಮತ್ತು ನಿವೃತ್ತ ಶಿಕ್ಷಕ ಡಿ.ವಿ.ಕುರಹಟ್ಟಿ ಅವರ ನೇತೃತ್ವದಲ್ಲಿ ನವಲಗುಂದದಲ್ಲಿ ರೈತರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಾಲೂಕು ಬರಪೀಡಿತವಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಲೋಕನಾಥ ಹೆಬಸೂರು ಒತ್ತಾಯಿಸಿದರು. ಮಹದಾಯಿ ಯೋಜನೆ ಜಾರಿ ಕುರಿತು ಸರ್ಕಾರಗಳು ಸ್ಪಷ್ಟ ನಿಲುವು ತಾಳುವವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಲೋಕನಾಥ ಹೆಬಸೂರ ಹಾಗೂ ಡಿ.ಬಿ.ಕುರಹಟ್ಟಿ ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಇವರ ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರವೇ ಹೊಣೆ ಎಂದು ರೈತ ಹೋರಾಟಗಾರರು ಎಚ್ಚರಿಸಿದ್ದಾರೆ.