ಬೆಂಗಳೂರು: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ಮೇವಿಲ್ಲದೇ ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ರಾಜ್ಯದಲ್ಲಿ ಇಂತಹ ಸ್ಥಿತಿ ಇದ್ದರೂ ಮೇವು ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.
ತುಮಕೂರಿನಲ್ಲಿ ಜಾನುವಾರುಗಳ ಮೇವು ಹಾಗೂ ಆಶ್ರಯಕ್ಕಾಗಿ ಮೀಸಲಿರಿಸಲಾಗಿದ್ದ 22 ಕೋಟಿ ರೂಪಾಯಿಯಷ್ಟು ಅನುದಾನದಲ್ಲಿ ಬೃಹತ್ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಉಪಲೋಕಾಯುಕ್ತರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ ಅಡಿ ತನಿಖೆ ನಡೆಸಿದ್ದು, "ಗೋಶಾಲೆಗಳಿಗಾಗಿ ಮೀಸಲಿಟ್ಟಿದ್ದ 22 ಕೋಟಿ ರೂಪಾಯಿ ಹಣವನ್ನು ತುಮಕೂರಿನ ಬರ ಪೀಡಿತ ತಾಲೂಕುಗಳು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಉಪಲೋಕಾಯುಕ್ತರ ವರದಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. 2016-17 ನೇ ಸಾಲಿನಲ್ಲಿ ತುಮಕೂರಿಗೆ ಜಾನುವಾರುಗಳ ಮೇವು ಹಾಗೂ ಆಶ್ರಯಕ್ಕಾಗಿ 22 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅನುದಾನದ ಸಂಪೂರ್ಣ ಮೊತ್ತ ದುರುಪಯೋಗವಾಗಿದ್ದು, ಮೇವು ಸರಿಯಾಗಿ ಪೂರೈಕೆಯಾಗಿಲ್ಲ, ಜಾನುವಾರುಗಳ ಆಶ್ರಯಕ್ಕಾಗಿ ನಿರ್ಮಿಸಲಾಗಿದ್ದ ಕಟ್ಟಡಗಳು ಕಳಪೆ ಗುಣಮಟ್ಟ ಹೊಂದಿವೆ, ನಕಲಿ ಬಿಲ್ ಗಳನ್ನು ಪಾವತಿಸಿ ಹಣ ದೋಚಲಾಗಿದೆ ಎಂದು ತಿಳಿದುಬಂದಿದೆ. ಹಗರಣಕ್ಕೆ ಸಂಬಂಧಿಸಿದಂತೆ 126 ಅಧಿಕಾರಿಗಳಿಗೆ ಲೋಕಾಯುಕ್ತ ನೊಟೀಸ್ ಜಾರಿ ಮಾಡಿದ್ದು, 22 ಕೋಟಿ ರೂಪಾಯಿ ದುರ್ಬಳಕೆ ಮಾಡಿರುವುದರ ಬಗ್ಗೆ ವಿವರಣೆ ಕೇಳಿದ್ದಾರೆ.