ಮತ್ತೆರಡು ಉಕ್ಕಿನ ಸೇತುವೆ ಯೋಜನೆಗಳನ್ನು ಕೈಬಿಡಲಿರುವ ಸರ್ಕಾರ?
ಬೆಂಗಳೂರು: ಚಾಲುಕ್ಯ ವೃತ್ತ-ಹೆಬ್ಬಾಳ ಉಕ್ಕಿನ ಸೇತುವೆ ಯೋಜನೆಯನ್ನು ಈಗಾಗಲೇ ಕೈಬಿಟ್ಟಿರುವ ಸರ್ಕಾರ ಇದೀಗ ನಗರದಲ್ಲಿ ಯೋಜಿಸಲಾಗಿರುವ ಮತ್ತೆರಡು ಉಕ್ಕಿನ ಸೇತುವೆ ಯೋಜನೆಗಳನ್ನು ಕೈಬಿಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಜೆಸಿ ರಸ್ತೆ ಮತ್ತು ಶಿವಾನಂದ ವೃತ್ತದ ಬಳಿ ನಿರ್ಮಾಣ ಮಾಡಲು ಯೋಜಿಸಲಾಗಿದ್ದ ಉಕ್ಕಿನ ಸೇತುವೆಯನ್ನು ಕೈಬಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ) ಮಹೇಂದ್ರ ಜೈನ್ ಅವರು ಮಾತನಾಡಿ, ನಗರದಲ್ಲಿ ಮತ್ತೆರಡು ಉಕ್ಕಿನ ಸೇತುವೆ ನಿರ್ಮಾಣ ಕುರಿತು ಯೋಜನೆಗಳನ್ನು ರೂಪಿಸಲಾಗಿತ್ತು. ಸಂಪುಟ ಸಭೆ ಕರೆದು ಸಭೆ ಬಳಿಕ ರಾಜ್ಯ ಸರ್ಕಾರ ಈ ಕುರಿತ ನಿರ್ಧಾರಗಳನ್ನು ಕೈಗೊಳ್ಳಲಿದೆ. ವಿರೋಧ ಪಕ್ಷಗಳ ತೀವ್ರ ಟೀಕೆ, ಸಾರ್ವಜನಿಕರು ಹಾಗೂ ಎನ್ ಜಿಒ ಗಳ ವಿರೋಧಗಳು ರಾಜ್ಯ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣವಾದವು ಎಂದು ಹೇಳಿದ್ದಾರೆ.
ಉಕ್ಕಿನ ಸೇತುವೆ ಕೈಬಿಡುವ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕರು ಖಚಿತ ಪಡಿಸಿದ್ದು, ಸರ್ಕಾರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಿದ್ದೇ ಆದರೆ, ಆರೋಪಗಳು ಹೀಗೆಯೇ ಮುಂದುವರೆಯುತ್ತವೆ. ದಾಖಲೆ ಹಾಗೂ ಸಾಕ್ಷ್ಯಾಧಾರಗಳಿಲ್ಲದೆಯೇ ಆರೋಪ ಮಾಡುವುದು ವಿರೋಧ ಪಕ್ಷಗಳಿಗೆ ಸುಲಭ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 1 ವರ್ಷ ಮಾತ್ರ ಬಾಕಿಯಿದ್ದು, ಸಾರ್ವಜನಿಕರ ಆಕ್ರೋಶಕ್ಕೇಕೆ ಕಾರಣರಾಗಬೇಕು? ಇದೊಂದು ಪ್ರಮುಖ ವರ್ಷವಾಗಿದ್ದು, ನಾವು ಏನೇ ಮಾಡಿದರೂ ಅದು ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಯೋಜನೆಯನ್ನೇ ಕೈಬಿಡಲು ಚಿಂತನೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ.
ಇನ್ನು ನಗರಾಭಿವೃದ್ಧಿ ಇಲಾಖೆ ಹೇಳುವ ಪ್ರಕಾರ, ನಗರದಲ್ಲಿ ಈಗಾಗಲೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಸಂಚಾರ ನಿಯಂತ್ರಣಕ್ಕೆ ಉಕ್ಕಿನ ಸೇತುವೆ ಪ್ರಮುಖವಾಗಿತ್ತು ಎಂದು ಹೇಳಿದೆ. ಕಾಂಕ್ರಿಟ್ ಸೇತುವೆ ನಿರ್ಮಾಣ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ವಾಹನಗಳ ದಟ್ಟಣೆ ಇರುವ ರಸ್ತೆಗಳಲ್ಲಿ ಸೇತುವೆ ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ. ಹೀಗಾಗಿಯೇ ಉಕ್ಕಿನ ಸೇತುವೆ ಪರಿಕಲ್ಪನೆ ಬಂದಿತ್ತು. ಉಕ್ಕಿನ ಸೇತುವೆ ನಿರ್ಮಾಣದಿಂದ ನಿರ್ಮಾಣದ ಸಮಯ ಕೂಡ ಕಡಿಮೆಯಾಗುತ್ತದೆ.
ಮಿನರ್ವ ಸರ್ಕಲ್ ದಿಂದ ಹಡ್ಸನ್ ವೃತ್ತದ ವರೆಗೆ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ರೂ.104 ಕೋಟಿ ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ರೂ.138 ಕೋಟಿ ವೆಚ್ಚದಲ್ಲಿ 2.35 ಕಿಮೀ ಯೋಜನೆಗೆ ಸಂಪುಟ ಕಳೆದ ವರ್ಷವಷ್ಟೇ ಒಪ್ಪಿಗೆ ಸೂಚಿಸಿತ್ತು. ಸೇತುವೆ ನಿರ್ಮಾಣ ಕುರಿತಂತೆ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು ಬಿಬಿಎಂಪಿ ಇಂಜಿನಿಯರ್ ಹೇಳಿದ್ದಾರೆ.
ಇದರಂತೆ ಶಿವಾನಂದ ವೃತ್ತದ ಬಳಿ ರೂ. 50 ಕೋಟಿ ವೆಚ್ಚದಲ್ಲಿ 330 ಮೀಟರ್ ಗಳ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, ಸರ್ಕಾರದ ಆದೇಶಕ್ಕಾಗಿ ಈ ಎರಡೂ ಯೋಜನೆಗಳು ಕಾಯುತ್ತಿದ್ದವು. ಆದರೆ, ಇದೀಗ ಯೋಜನೆಗಳನ್ನು ಕೈಬಿಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos