ಬೆಂಗಳೂರು: ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ನೀಡುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ಪ್ರಯಾಣಿಕರ ದೂರನ್ನು ಗಣನೆಗೆ ತೆಗೆದುಕೊಂಡಿರುವ ರೈಲ್ವೆ ಮಂಡಳಿ, ರೈಲಿನ ಕ್ಯಾಟರಿಂಗ್ ಕಾರ್ಯನಿರ್ವಹಣೆಯನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮಕ್ಕೆ(ಐಆರ್ ಸಿಟಿಸಿ) ಹಸ್ತಾಂತರಿಸಲು ನಿರ್ಧರಿಸಿದೆ. ಏಳು ವರ್ಷಗಳ ನಂತರ ನಿಗಮ ತನ್ನ ಈ ಕಾರ್ಯವನ್ನು ಮತ್ತೆ ತೆಗೆದುಕೊಳ್ಳಲಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಐಆರ್ ಸಿಟಿಸಿಯ ಹಿರಿಯ ಅಧಿಕಾರಿಗಳು, ನಿಗಮದ ಈ ನಡೆಯಿಂದ ಆಹಾರದ ಗುಣಮಟ್ಟ ಹೆಚ್ಚಲಿದೆ. ಫೆಬ್ರವರಿ 27ರಂದು ರೈಲ್ವೆ ಇಲಾಖೆ ಹೊರಡಿಸಿರುವ ಯೋಜನೆ ಪ್ರಕಾರ, ರೈಲುಗಳಲ್ಲಿ ನೀಡುವ ಆಹಾರ ತಾಜಾ ಮತ್ತು ಬಿಸಿಯಾಗಿರಬೇಕೆಂದು ನಿಗಮಕ್ಕೆ ರೈಲ್ವೆ ನಿಲ್ದಾಣಗಳಲ್ಲಿ ಅಡಿಗೆ ಮನೆಗಳನ್ನು(ಬೇಸ್ ಕಿಚನ್) ಸ್ಥಾಪಿಸುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.
ಇನ್ನೊಂದು ತಿಂಗಳೊಳಗೆ ನಮ್ಮ ವ್ಯಾಪಾರದ ಮಾದರಿಯನ್ನು ಸಲ್ಲಿಸುತ್ತೇವೆ. ಮೂಲ ಅಡಿಗೆಮನೆ ಯಾವ್ಯಾವ ನಿಲ್ದಾಣಗಳಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರದ ಹಂತದಲ್ಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿವರಗಳನ್ನು ನೀಡಲು ಉನ್ನತ ಮಟ್ಟದ ಸಭೆಯನ್ನು ದೆಹಲಿಯಲ್ಲಿ ನಡೆಸಲಾಗಿದೆ.
ಯೋಜನೆ ಪ್ರಕಾರ, ಬೇಸ್ ಕಿಚನ್ ಇನ್ನು 6 ತಿಂಗಳೊಳಗೆ ಸ್ಥಾಪಿಸಬೇಕು. ರೈಲು ನಿಲ್ದಾಣದ ಒಳಗೆ ಜಾಗವನ್ನು ನೀಡಬೇಕೆಂದಿರುವುದರಿಂದ ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಡಿಗೆಮನೆಯಲ್ಲಿ ಅಗತ್ಯಪಟ್ಟ ಮೂಲಸೌಕರ್ಯಗಳನ್ನು ನಿರ್ಮಿಸಬೇಕಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಆದರೆ ರೈಲ್ವೆ ನಿಗಮದ ಈ ನಡೆ ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಅನುಕೂಲವಾಗುತ್ತದೆ ಎಂಬುದು ಸದ್ಯದ ಪ್ರಶ್ನೆ.