ಬೆಂಗಳೂರು: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಎಲ್ಲಾ ವರ್ಗದವರಲ್ಲಿಯೂ ಸಂತಸ ತರುವ ಪೂರ್ಣ ಪ್ರಮಾಣದ ಬಜೆಟ್ ನ್ನು ಮಂಡಿಸಲು ಮುಂದಾಗಿದ್ದಾರೆ.
ತಮ್ಮ ಸಂಪುಟ ಸಚಿವರ ಸಭೆಯನ್ನು ನಿನ್ನೆ ನಡೆಸಿದ ಅವರು, ಸಮಾಜದ ಪ್ರತಿ ವರ್ಗದ ಜನರಿಗೆ ಪ್ರಯೋಜನವಾಗುವ ಬಜೆಟ್ ನ್ನು ಹೇಗೆ ಮಂಡಿಸಬಹುದು ಎಂಬುದರ ಬಗ್ಗೆ ಸಲಹೆ ಕೇಳಿದರು.
ಕಳೆದ ಮೂರು ಸಲದ ಬಜೆಟ್ ನಲ್ಲಿ ಅವರು ಅಹಿಂದ(ಅತಿ ಹಿಂದುಳಿದ ಮತ್ತು ದಲಿತ) ದೃಷ್ಟಿಕೋನವನ್ನಿಟ್ಟುಕೊಂಡು ಬಜೆಟ್ ಮಂಡಿಸಿದ್ದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸಿದ್ದರಾಮಯ್ಯ, ದಲಿತರು ಮತ್ತು ಹಿಂದುಳಿದ ವರ್ಗಗಳ ಜನರ ಗೃಹ ಸಾಲವನ್ನು ಮನ್ನಾ ಮಾಡಿದ್ದರು ಮತ್ತು ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು. ಇನ್ನೊಂದು ವರ್ಷ ಬಜೆಟ್ ನಲ್ಲಿ ಎಸ್ ಸಿ ಮತ್ತು ಎಸ್ಟಿ ವರ್ಗದವರಿಗೆ ಅನುಗುಣವಾಗಿ ಹಂಚಿಕೆ ಮಾಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದರು.
ಇದೀಗ ತನ್ನ ಅಹಿಂದ ರೂಪದಿಂದ ಹೊರಬಂದು ಎಲ್ಲಾ ವರ್ಗದ ಜನರನ್ನು ಖುಷಿಪಡಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಬೇಕೆಂದು ಹಲವು ಸಚಿವರು ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.
ವಿರೋಧ ಪಕ್ಷದ ಆಕ್ರಮಣವಾದ ಡೈರಿ ವಿವಾದ, ಸ್ಟೀಲ್ ಮೇಲ್ಸೇತುವೆ, ಪಶ್ಚಿಮ ಘಟ್ಟಗಳ ಜೀವ ಸಮತೋಲನ ಕಾಪಾಡುವ ಕಸ್ತೂರಿ ರಂಗನ್ ಸಮಿತಿ ವರದಿ ಮತ್ತು ಬಡ್ತಿಯಲ್ಲಿ ಎಸ್ಸಿ ಮತ್ತು ಎಸ್ಟಿ ನೌಕರರಿಗೆ ಮೀಸಲಾತಿಯನ್ನು ರದ್ದುಪಡಿಸುವ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಇವುಗಳನ್ನು ಮೀರಿ ಜನಪರ ಜನಪ್ರಿಯ ಬಜೆಟ್ ಮಂಡನೆ ಕುರಿತು ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.