ಬೆಂಗಳೂರು: ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸಗುವ ಮೂಲಕ ರಾಜಧಾನಿಯಲ್ಲಿ ಆಂತಕ ಸೃಷ್ಟಿಸಿದ್ದ ಕಿರಾತಕ ಸರಣಿ ಅತ್ಯಾಚಾರಿಯನ್ನು ಸಂಜಯನಗರ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಲಬುರ್ಗಿ ಮೂಲದ ಮಲ್ಲಿಕಾರ್ಜುನ ಹೊರಿ ಅಲಿಯಾಸ್ ರಾಜು (27) ಎಂದು ಗುರ್ತಿಸಲಾಗಿದೆ. ಆರೋಪಿ ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿ ಕೆಲ ವರ್ಷಗಳಿಂದಲೂ ನೆಲೆಯೂರಿದ್ದ.
ಆರೋಪಿ ಮಲ್ಲಿಕಾರ್ಜುನ ಹಲವು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ. ಹಲವು ಬೈಕ್ ಗಳನ್ನು ಕೂಡ ಕಳ್ಳತನ ಮಾಡಿದ್ದ. ಅಪ್ರಾಪ್ತ ಹೆಣ್ಣು ಮಕ್ಕಳಿಗೆ ತಿಂಡಿ ಕೊಡಿಸುವ ಆಸೆ ತೋರಿಸಿ ಅವರನ್ನು ಅಪಹರಣ ಮಾಡುತ್ತಿದ್ದ ಆರೋಪಿ, ಮಕ್ಕಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗುತ್ತಿದ್ದ.
ಕೆಲ ದಿನಗಳ ಹಿಂದಷ್ಟೇ ಹಣ್ಣು ಮಾರಾಟ ಮಾಡುವ ಯುವತಿಯೊಬ್ಬಳ ಬಳಿ ಹೋಗಿದ್ದ ಆರೋಪಿ ದೊಡ್ಡಬಳ್ಳಾಪುರ ರಸ್ತೆಯ ರಾಜನುಕುಂಟೆಯಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿ ಸಮಾರಂಭವಿದ್ದು, ಸಮಾರಂಭಕ್ಕೆ ಬರುವಂತೆ ಕೂಗಿದ್ದಾನೆ. ಸಮಾರಂಭಕ್ಕೆ ಬಂದಿದ್ದ ಯುವತಿಯನ್ನು ಆರೋಪಿ ಬಲವಂತದಿಂದ ರಾತ್ರಿ ಅಲ್ಲಿಯೇ ಉಳಿಯುವಂತೆ ತಿಳಿಸಿದ್ದಾನೆ. ಈ ವೇಳೆ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರ್'ಆರ್ ನಗರ ಮತ್ತು ಬನಶಂಕರಿಯಲ್ಲಿಯೂ ಇದೇ ರೀತಿಯ ಪ್ರಕರಣಗಳು ನಡೆದಿರುವುದನ್ನು ಗಮನಿಸಿದ್ದಾರೆ.
ಆರೋಪಿ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಮೊದಲಿಗೆ ಪೊಲೀಸರು ಆರೋಪಿ ಮಲ್ಲಿಕಾರ್ಜುನ ವಾಹನದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ. ನಂತರ ಆರೋಪಿ ಬಗ್ಗೆ ಮಾಹಿತಿ ಕಲೆಹಾಕಿ ಕೊನೆಗೂ ಆತನ ಮನೆಯಲ್ಲಿಯೇ ಸೋಮವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಸಾಮಾನ್ಯವಾಗಿ ಒಂಟಿಯಾಗಿರುತ್ತಿದ್ದ ಅಪ್ರಾಪ್ತ ಬಾಲಕಿಯರನ್ನೇ ಗುರಿ ಮಾಡುತ್ತಿದ್ದ. ತಿಂಡಿ ಆಸೆ ತೋರಿಸಿ ಮಕ್ಕಳನ್ನು ಅಪಹರಣ ಮಾಡಿ, ಅತ್ಯಾಚಾರವೆಸಗುತ್ತಿದ್ದ. ನಂತರ ಮಕ್ಕಳಿಗೆ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಅಪ್ರಾಪ್ತ ಮಕ್ಕಳನ್ನು ಆತನನ್ನು ಗುರ್ತಿಸುತ್ತಿರಲಿಲ್ಲ. ಹೀಗಾಗಿಯೇ ಮಕ್ಕಳನ್ನೇ ಈತ ಗುರಿ ಮಾಡುತ್ತಿದ್ದ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos