ಬೆಂಗಳೂರು; ಕೊಳಚೆ ನೀರು ದಾಟಲು ಹಿಂಜರಿದ್ದ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಭರವಸೆಯನ್ನು ನೀಡಿದೆ.
ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆಗೆಂದು ತೆರಳಿದ್ದ ಜಿಲ್ಲಾ ಪಂಚಾಯತ್ ಸಿಇಒ ಕೊಳಚೆ ನೀರು ದಾಟಲು ಹಿಂದೇಟು ಹಾಕಿದ್ದರು. ಈ ಹಿನ್ನಲೆಯಲ್ಲಿ ಊರಿನ ಗ್ರಾಮಸ್ಥರೇ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಥಳಕ್ಕೆ ತಲುಪಿಸಿದ್ದರು. ತುಮಕೂರಿನ ಅತ್ಕೂರು ಗ್ರಾಮದಲ್ಲಿ ಘಟನೆ ನಡೆದಿತ್ತು.
ಅಧಿಕಾರಿಯ ಈ ವರ್ತನೆಗೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿದ್ದವು. ನಿನ್ನೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಜೆಡಿಎಸ್ ಸದಸ್ಯ ಮನಪ್ಪ ವಿಜ್ಜಲ್ ಅವರು ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟ ಹಾಗೂ ಇತರೆ ನಾಯಕರೂ ಕೂಡ ದನಿಗೂಡಿಸಿದ್ದರು.
ನಂತರ ಮಾತನಾಡಿದ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು, ರಾಯಚೂರು ಉಪ ಆಯುಕ್ರ ಬಳಿ ವರದಿ ಪಡೆದು ಕೂಡಲೇ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆಗೆಂದು ಜಿಲ್ಲಾ ಸಿಇಒ ಎಂ. ಕೂರ್ಮಾ ರಾವ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೇ ಹಾಗೂ ಸದಸ್ಯರು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕುಡಿಯುವ ನೀರಿನ ಘಟಕದ ಸುತ್ತಲೂ ಕೊಳಚೆ ನೀರು ನಿಂತಿದ್ದು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಆದರೆ, ಬೂಟು ಧರಿಸಿದ್ದ ಜಿಪಂ ಕೂರ್ಮಾ ರಾವ್ ಕೊಳಚೆ ನೀರು ದಾಟಿಕೊಂಡು ನೀರುವ ಘಟಕದ ಬಳಿ ತೆರಳಲು ಹಿಂದೇಟು ಹಾಕಿದ್ದರು.
ಹೇಗಾದರೂ ಬರ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲೇಬೇಕೆಂದು ಗ್ರಾಮಸ್ಥರು ಕೊನೆಗೆ ತಾವೇ ಸಿಇಒ ಅವರನ್ನು ಹೆಗಲ ಮೇಲೆ ಹೊತ್ತು ನಡೆದುಕೊಂಡೇ ಘಟಕದ ಜಾಗಕ್ಕೆ ಕರೆದೊಯ್ದಿದ್ದರು. ಪರಿಶೀಲನೆ ಬಳಿಕ ಮತ್ತೆ ಅದೇ ರೀತಿ ಹೆಗಲ ಮೇಲೆ ಹೊತ್ತು ಮೊದಲಿದ್ದ ಜಾಗಕ್ಕೆ ತಂದು ಬಿಟ್ಟಿದ್ದರು.