ಬೆಂಗಳೂರು: ಯೋಧರ ಜೀವ ಉಳಿಸುವ ಸಾಧನದ ಅಭಿವೃದ್ಧಿಗೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ನೆರವು ನೀಡಿದೆ.
ಬೆಂಗಳೂರು ದಕ್ಷಿಣದಲ್ಲಿರುವ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯೋಧರ ಜೀವ ಉಳಿಸಲು ನೆರವಾಗಬಲ್ಲಂತಹ 90 ಸೆಕೆಂಡ್ ಗಳಲ್ಲಿ ರಕ್ತ ಸ್ರಾವವನ್ನು ತಡೆಯುವ ಸಮರ್ಥ್ಯ ಹೊಂದಿರುವ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಶೃಂಗೇರಿ ಮಠ 30 ಕೋಟಿ ರೂಪಾಯಿ ನೆರವು ನೀಡಿದೆ.
ಯುದ್ಧ ಭೂಮಿಯಲ್ಲಿ, ಗಡಿಯಲ್ಲಿ ಯೋಧ ರಕ್ತ ಸ್ರಾವದಿಂದ ಬಳಲುತ್ತಿದ್ದರೆ, ಅದನ್ನು ತಕ್ಷಣವೇ ತಡೆಗಟ್ಟುವ ಉದ್ದೇಶದಿಂದ ಈ ಹೊಸ ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಂಟಿಯಾಗಿ ಸಾಧನ ಅಭಿವೃದ್ಧಿಪಡಿಸಿರುವ ಎಂ ಎಸ್ ಸಂತೋಷ್ ಹಾಗೂ ದಿವಾಕರ ಎಂ.ಬಿ ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಾರ್ಬಾಕ್ಸಿಲ್ ಸಂಯೋಜಿತ ಗ್ರ್ಯಾಫೀನ್ ಸ್ಪಾಂಜ್ ನ್ನು (ಡಿಎಪಿಜಿಎಸ್) ಹೊಂದಿರುವ ಉತ್ಪನ್ನ ಆಕ್ಸಿಯೋಸ್ಟಾಟ್ ಬಳಕೆಯನ್ನು ಹೋಲುತ್ತದೆ. ಆದರೆ ಆಕ್ಸಿಯೋಸ್ಟಾಟ್ ಸಾಧನ 3-4 ನಿಮಿಷಗಳಲ್ಲಿ ರಕ್ತಸ್ರಾವವನ್ನು ತಡೆಗಟ್ಟಿದರೆ, ಹೊಸ ಸಾಧನ 90 ಸೆಕೆಂಡ್ ಗಳಲ್ಲಿ ರಕ್ತ ಸ್ರಾವವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದ್ದು, ಈ ಸಾಧನದ ಅಭಿವೃದ್ಧಿಗೆ ಶೃಂಗೇರಿ ಮಠ ನೆರವು ನೀಡಿದೆ.