ಸರ್ಕಾರದ ಎಡವಟ್ಟು: ಐಟಿ ಪರೀಕ್ಷೆ ಬರೆದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನವೇ ಇಲ್ಲ!
ಬೆಂಗಳೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಅಡಿಯಲ್ಲಿ 2014-15 ರಲ್ಲಿ ರಾಷ್ಟ್ರೀಯ ನೈಪುಣ್ಯ ಅರ್ಹತಾ ಮಾನದಂಡವನ್ನು ಜಾರಿಗೊಳಿಸಿದ್ದ ರಾಜ್ಯ ಸರ್ಕಾರ ಕೌಶಲ್ಯ ಆಧಾರಿತ ಶಿಕ್ಷಣವನ್ನು ತೃತೀಯ ಭಾಷೆಯನ್ನಾಗಿ ಸ್ವೀಕರಿಸಲು 9 ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿತ್ತು.
ಕಳೆದ ವರ್ಷ 9 ನೇ ತರಗತಿಯಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ)ವನ್ನು ತೃತೀಯ ಭಾಷೆಯನ್ನಾಗಿ ಸ್ವೀಕರಿಸಿದ್ದ 75 ಶಾಲೆಗಳ 1,300 ವಿದ್ಯಾರ್ಥಿಗಳು ಈ ವರ್ಷ 10 ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಆದರೆ ಪರೀಕ್ಷೆಯ ಭಾಗವಾಗಿದ್ದ ಐಟಿ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನವೇ ಇರಲಿಲ್ಲ ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರ ಕೌಶಲ್ಯ ಆಧಾರಿತ ಶಿಕ್ಷಣವನ್ನು ತೃತೀಯ ಭಾಷೆಯನ್ನಾಗಿ ಸ್ವೀಕರಿಸಲು ಪ್ರತಿ ಶಾಲೆಯಿಂದ ಕನಿಷ್ಠ 25 ವಿದ್ಯಾರ್ಥಿಗಳಿಗೆ ಅವಕಾಶ ನೀಡಿತ್ತು. 9 ನೇ ತರಗತಿಯಲ್ಲಿ ತೃತೀಯ ಭಾಷೆಯನ್ನಾಗಿ ಕೌಶಲ್ಯ ಆಧಾರಿತ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡಿದ್ದ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳು ಈಗ 10 ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಸಿಗದೇ ಇದ್ದ ಹಿನ್ನೆಲೆಯಲ್ಲಿ ವಿಷಯ ಜ್ಞಾನವೇ ಇಲ್ಲದೇ ವಿದ್ಯಾರ್ಥಿಗಳು ಪ್ರಾಕ್ಟಿಕಲ್ ಪರೀಕ್ಷೆ ಎದುರಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಈ ಬಗ್ಗೆ ಅಂಕಿ-ಅಂಶ ಸಹಿತ ವರದಿ ಪ್ರಕಟಿಸಿದೆ. ಶಾಲೆಗಳಲ್ಲಿ ಐಟಿ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ರಾಜ್ಯ ಸರ್ಕಾರ ಬೆಂಗಳೂರಿನ ಐಟಿ ಸಂಸ್ಥೆಗೆ ಹೊರಗುತ್ತಿಗೆ ನೀಡಿತ್ತು. ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅಗತ್ಯವಿರುವ ಉಪಕರಣಗಳು, ಬೋಧನ ಮತ್ತು ಪಠ್ಯವಸ್ತುಗಳನ್ನು ಪೂರೈಕೆ ಮಾಡಬೇಕಾದ ಜವಾಬ್ದಾರಿಯೂ ಸಂಸ್ಥೆಯದ್ದೇ ಆಗಿತ್ತು. ಆದರೆ ಬೋಧಕರನ್ನು ಮಾತ್ರ ನೀಡಿದ್ದ ಸಂಸ್ಥೆ ಉಳಿದ ಉಪಕರಣಗಳನ್ನು ಪಠ್ಯ ವಸ್ತುಗಳನ್ನು ಪೂರೈಕೆ ಮಾಡಲು ವಿಫಲವಾಗಿತ್ತು. ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳು ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ದು ಒಂದು ತಿಂಗಳು ಪ್ರಾಯೋಗಿಕ ತರಬೇತಿ ಕೊಡಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಅವಕಾಶ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಕ್ಕ ಅವಕಾಶವೂ ಸಿಗದಂತಾಗಿ ವಿಷಯ ಜ್ಞಾನವೇ ಇಲ್ಲದೇ 75 ಶಾಲೆಗಳ 1,300 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos