ಬೆಂಗಳೂರು: ಹೈಕೋರ್ಟ್ ನಿರ್ದೇಶನವಿದ್ದರೂ ರಾಜರಾಜೇಶ್ವರಿ ನಗರದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ವೀವ್ ಶಾಲೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) 24 ಮಕ್ಕಳಿಗೆ ಪ್ರವೇಶ ನಿರಾಕರಿಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆರ್ ಟಿಇ ಮಕ್ಕಳ ಪೋಷಕರು ಪ್ರವೇಶಕ್ಕಾಗಿ ಶಾಲಾ ಆಡಳಿತ ಮಂಡಳಿಯನ್ನು ಭೇಟಿ ಮಾಡಿದ್ದಾರೆ. ಆದರೆ ಪ್ರವೇಶ ನೀಡಲು ನಿರಾಕರಿಸಿದ ಶಾಲಾ ಸಿಬ್ಬಂದಿ, ತಮ್ಮ ಶಾಲೆಯ ಅಧ್ಯಕ್ಷರಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಪತ್ರ ತೆಗೆದುಕೊಂಡು ಬರುವಂತೆ ಪೋಷಕರಿಗೆ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಸಿಬಿಎಸ್ ಇಯಿಂದ ಮಾನ್ಯತೆ ಪಡೆದಿರುವ ಹಿಲ್ ವೀವ್ ಶಾಲೆಯಲ್ಲಿ ಆರ್ ಟಿಇ ಅಡಿ 1ನೇ ತರಗತಿಗೆ ಸೀಟ್ ಹಂಚಿಕೆಯಾಗಿದ್ದ 24 ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ ಪೋಷಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿದ್ದರು. ಅವರು ಪ್ರವೇಶ ಕೊಡಿಸುವ ಭರವಸೆ ನೀಡಿದ್ದರು. ಆದರೆ ಪ್ರವೇಶ ಕೊಡಿಸುವ ಬಗ್ಗೆ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ ನಾವು ಹೈಕೋರ್ಟ್ ಮೊರೆ ಹೋಗಿದ್ದೇವು. ಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿ ಪ್ರವೇಶ ನೀಡುವಂತೆ ಶಾಲೆಗೆ ಸೂಚಿಸಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದೊಂದಿಗೆ ನಾವು ಶಾಲಾ ಪ್ರಾಚಾರ್ಯರನ್ನು ಭೇಟಿ ಮಾಡಿದ್ದೇವೆ. ಅವರು ಈ ಕುರಿತು ಸುಮಾರು ಒಂದು ಗಂಟೆ ಚರ್ಚಿಸಿದ ಬಳಿಕ, ಪ್ರವೇಶ ಪಡೆಯಲು ಶಾಲಾ ಅಧ್ಯಕ್ಷರಿಂದ ಪತ್ರ ತರುವಂತೆ ನಮಗೆ ಸೂಚಿಸಿದ್ದಾರೆ. ಆದರೆ ಇನ್ನು ಎರಡು ದಿನ ನಾವು ಕಾಯುತ್ತಿವೆ. ಒಂದು ವೇಳೆ ಪ್ರವೇಶ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮತ್ತೊಬ್ಬ ಪೋಷಕರು ಎಚ್ಚರಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಈ ಶಾಲೆಯ ಅಧ್ಯಕ್ಷರಾಗಿದ್ದು, ಶಾಲೆಯಲ್ಲಿ ಆರ್ಟಿಇ ಅಡಿ ಲಭ್ಯವಿದ್ದ ಸೀಟಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಅರ್ಜಿ ಸಲ್ಲಿಸಿ, ಆನ್ಲೈನ್ ಸೀಟು ಹಂಚಿಕೆ ಪ್ರಕ್ರಿಯೆ ಮೂಲಕವೇ ಸೀಟು ಪಡೆದ ಮಕ್ಕಳಿಗೆ ಪ್ರವೇಶ ನಿರಾಕರಿಸುವ ಮೂಲಕ ಶಾಲಾಡಳಿತ ಮಂಡಳಿ ಸರ್ಕಾರದ ಆದೇಶ ಉಲ್ಲಂಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos