ಬೆಂಗಳೂರು: ಕದ್ದ ಪರ್ಸ್ ನೊಳಗೇ ಇದ್ದ ಎಟಿಎಂ ಪಿನ್ ನಂಬರ್ ಬಳಕೆ ಮಾಡಿ ಚಾಣಾಕ್ಷ ಕಳ್ಳನೋರ್ವ ಬರೊಬ್ಬರಿ 1 ಲಕ್ಷ ಹಣವನ್ನು ಎಗರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಧನಂಜಯ್ ಗಣಪತಿ ಬಂಕರ್ ಎಂಬುವವರ ಮೂರು ಬ್ಯಾಂಕ್ ಖಾತೆಗಳಿಂದ ಕಳ್ಳನೋರ್ವ ಹಣವನ್ನು ಅಕ್ರಮವಾಗಿ ಡ್ರಾಮಾಡಿದ್ದು, ಈ ವಿಚಾರ ತಡವಾಗಿ ತಿಳಿದ ಕಾರಣ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಧನಂಜಯ್ ಗಣಪತಿ ಬಂಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಲಗಳ ಪ್ರಕಾರ ಧನಂಜಯ್ ಗಣಪತಿ ಬಂಕರ್ ಅವರು, 78ನೇ ಇಂಡಿಯನ್ ನ್ಯಾಷನಲ್ ರೋಡ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಹಾರಾಷ್ಟ್ರದ ಪುಣೆಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ರೂಮ್ ಮಾಡಿಕೊಂಡಿದ್ದ ಅವರ ಮೊಬೈಲ್ ಬ್ಯಾಂಕ್ ನಿಂದ ಸುಮಾರು 1.1ಲಕ್ಷ ಹಣ ಡ್ರಾ ಆಗಿರುವ ಕುರಿತ ಸರಣಿ ಮೆಸೇಜ್ ಗಳು ಬಂದಿತು. ಕೂಡಲೇ ತಮ್ಮ ಪರ್ಸ್ ಚೆಕ್ ಮಾಡಿದ ಧನಂಜಯ ಅವರಿಗೆ ಆಗ ತಮ್ಮ ಪರ್ಸ್ ಕಳುವಾಗಿರುವ ಕುರಿತು ಅರಿವಾಗಿದೆ. ಕೂಡಲೇ ತಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಲು ಧನಂಜಯ ಅವರು ಮುಂದಾದರಾದರೂ ಅಷ್ಟು ಹೊತ್ತಿಗಾಗಲೇ ಕಳ್ಳ ಅವರ ಮೂರು ಖಾತೆಯಗಳಿಂದ 1.1ಲಕ್ಷ ಹಣವನ್ನು ಡ್ರಾ ಮಾಡಿದ್ದ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಧನಂಜಯ್ ಗಣಪತಿ ಬಂಕರ್ ಅವರು, ನಾನು ಮಹಾರಾಷ್ಟ್ರ ಮೂಲದವನಾಗಿದ್ದು, ಮಹಾರಾಷ್ಟ್ಕ ಸರ್ಕಾರದ ಬಿಡಬಲ್ಯೂಡಿ ಇಲಾಖೆಯಲ್ಲಿ ಸೂಪರಿಂಟೆಂಡ್ ಎಂಜಿನಿಯರ್ ಆಗಿ ನಿವೃತ್ತಿಯಾಗಿದ್ದೇನೆ. ನನಗೀಗ 68 ವರ್ಷ..ನನಗೆ ನೆನಪಿನ ಶಕ್ತಿ ಕಡಿಮೆ ಇದ್ದು, ಇದೇ ಕಾರಣಕ್ಕೆ ಎಟಿಎಂ ಪಿನ್ ಸಂಖ್ಯೆಗಳನ್ನು ಬರೆದು ಪರ್ಸ್ ನೊಳಗೆ ಹಾಕಿರುತ್ತಿದ್ದೆ. ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿನಲ್ಲಿ ಪರ್ಸ್ ಕಳವಾಗಿರುವ ಸಾಧ್ಯತೆ ಇದ್ದು, ಪರ್ಸ್ ನಲ್ಲಿದ್ದ ಎಟಿಎಂ ಪಿನ್ ಸಂಖ್ಯೆಯನ್ನು ಉಪಯೋಗಿಸಿಕೊಂಡು ಕಳ್ಳನೋರ್ವ ಹಣ ಕಳವು ಮಾಡಿದ್ದಾನೆ. ಪರ್ಸ್ ನಲ್ಲಿ ಕೇವಲ 3 ಎಟಿಎಂ ಕಾರ್ಡ್ ಗಳು ಇದ್ದವು. ಎರಡು ಎಸ್ ಬಿಐ ಬ್ಯಾಂಕ್ ನದ್ದಾಗಿದ್ದರೆ ಮತ್ತೊಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ್ದಾಗಿತ್ತು. ಎಟಿಎಂ ಕಾರ್ಡ್ ಗಳು ಮಾತ್ರವಲ್ಲದೇ ನನ್ನ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳ ನಕಲು ಪ್ರತಿಗಳು ಕೂಡ ಇದ್ದವು. ಅದರೊಂದಿಗೆ 1400 ನಗದು ಹಣ ಕೂಡ ಇತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos