ಬೆಂಗಳೂರು: ಬಿಬಿಎಂಪಿ ಸಹಾಯಕ ಆಯುಕ್ತ ಹುದ್ದೆಯಲ್ಲಿದ್ದ ಅವಧಿಯಲ್ಲಿ ನನ್ನ ವೇತನದಿಂದ ಕಡಿತ ಮಾಡಲಾಗಿದ್ದ ಜಿಪಿಎಫ್ (ಸಾಮಾನ್ಯ ಭವಿಷ್ಯ ನಿಧಿ) ಹಣವನ್ನು ನನ್ನ ಭವಿಷ್ಯ ನಿಧಿ ಖಾತೆಗೆ ಪಾವತಿ ಮಾಡದೆ ಪಾಲಿಕೆ ಅಧಿಕಾರಿಗಳು ದುರಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೆಎಎಸ್ ಅಧಿಕಾರಿ ಹಾಗೂ ಸಕಾಲ ಮಿಷನ್ ಆಡಳಿತಾಧಿಕಾರಿ ಕೆ. ಮಥಾಯ್ ಆರೋಪಿಸಿದ್ದಾರೆ.
ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಥಾಯಿ, ‘2014ರ ನವೆಂಬರ್ ನಿಂದ 2016ರ ಏಪ್ರಿಲ್ವರೆಗೆ ನಾನು ಪಾಲಿಕೆಯ ಸಹಾಯಕ ಆಯುಕ್ತ (ಜಾಹೀರಾತು ವಿಭಾಗ) ಹುದ್ದೆಯನ್ನು ನಿಭಾಯಿಸಿದ್ದೆ. ಈ ಅವಧಿಯಲ್ಲಿ ನನ್ನ ವೇತನದಿಂದ ಪ್ರತಿ ತಿಂಗಳು ಜಿಪಿಎಫ್ ರೂಪದಲ್ಲಿ ರು. 15 ಸಾವಿರ ಕಡಿತ ಮಾಡಲಾಗಿತ್ತು. ಈ ಕುರಿತು ಇತ್ತೀಚೆಗೆ ಮಹಾಲೇಖಪಾಲರ ಕಚೇರಿಯಲ್ಲಿ ವಿಚಾರಿಸಿದರೆ, ‘ನಿಮ್ಮ ಖಾತೆಗೆ ಬಿಬಿಎಂಪಿಯಿಂದ ಯಾವುದೇ ಜಿಪಿಎಫ್ ಪಾವತಿಯಾಗಿಲ್ಲ’ ಎಂದು ಹೇಳಿದರು. ಜಿಪಿಎಫ್ ಪಾವತಿಸದಿರುವ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ’ ಎಂದು ಮಥಾಯಿ ದೂರಿನಲ್ಲಿ ತಿಳಿ ಸಿದ್ದಾರೆ.
ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಹಾಗೆಯೇ, ನನ್ನ ವೇತನದಿಂದ ಕಡಿತ ಮಾಡಿರುವ ರು. 2.50 ಲಕ್ಷದ ಜತೆಗೆ ಶೇ8ರಷ್ಟು ಬಡ್ಡಿ ಮೊತ್ತವಾದ ರು. 60 ಸಾವಿರವನ್ನು ತ್ವರಿತವಾಗಿ ನನ್ನ ಭವಿಷ್ಯ ನಿಧಿ ಖಾತೆಗೆ ಜಮೆ ಮಾಡಿಸಬೇಕು’ ಎಂದು ಅವರು ಕೋರಿದ್ದಾರೆ.
ಕಳೆದ ಒಂದು ವರ್ಷದಿಂದ ಈ ಸಂಬಂಧ ನಾನು ಹಲವು ಬಾರಿ ಬಿಬಿಎಂಪಿಗೆ ಪತ್ರ ಬರೆದಿದ್ದೇನೆ, ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ನನ್ನ ಸಿಬ್ಬಂದಿ ಕೂಡ ಸುಮಾರು 50 ಸಾರಿ ಭೇಟಿ ಮಾಡಿದ್ದಾರೆ, ಆದರೆ ಅವರಿಗೆ ಸಮರ್ಪಕ ಉತ್ತರ ನೀಡಿಲ್ಲ ಹೀಗಾಗಿ ನಾನು ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ಮಥಾಯಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos