ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ರಮೇಶ್ ಯಾದವ್ ಮಧ್ಯಪ್ರದೇಶ ಮೂಲದ ಕಮಲೇಶ್ ಕುಮಾರ್ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.
ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮುಖ್ಯ ಕಡಲತೀರದಲ್ಲಿ ನೀರಿಗೆ ಇಳಿದಾಗ ಎರಡು ಜನ ಅಲೆಗೆ ಕೊಚ್ಚಿ ಹೋಗಿದ್ದರು. ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ್ ಅಂಬಿ, ರಾಜು ಅಂಬಿ, ಚಂದ್ರಕಾಂತ್ ಹಾಗೂ ಪುರುಷೋತ್ತಮ್ ಹರಿಕಾಂತ್ ರಮೇಶ್ ಯಾದವ್ ಮತ್ತು ಕಮಲೇಶ್ ಕುಮಾರ್ ಅವರನ್ನು ರಕ್ಷಿಸಿದ್ದಾರೆ.
ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.