ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಮಂಗಳವಾರ ರಾತ್ರಿ ಕ್ಯಾಬ್ ಚಾಲಕರ ತಂಡವೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ದೇವ್ ಬ್ಯಾನರ್ಜಿ ಅವರು ತನ್ನ ಸ್ನೇಹಿತನ ಜೊತೆ ನಿನ್ನೆ ರಾತ್ರಿ ಮುಂಬೈಯಿಂದ ಬೆಂಗಳೂರಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಿಂದ ನಗರಕ್ಕೆ ಬರಲು ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕ ಕೋಪಗೊಂಡಿದ್ದಾನೆ.
ಕ್ಯಾಬ್ ಚಾಲಕನ ವರ್ತನೆಯಿಂದ ಬೇಸತ್ತ ದೇವ್ ಹಾಗೂ ಅವರ ಸ್ನೇಹಿತ ಆ ಕ್ಯಾಬ್ ನಿರಾಕರಿಸಿ ಮತ್ತೊಂದು ಕ್ಯಾಬ್ ಹತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಕ್ಯಾಬ್ ನ ಚಾಲಕ ಇತರೆ ಚಾಲಕರೊಂದಿಗೆ ಸೇರಿ ಉದ್ಯಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಚಾಲಕರ ಹಲ್ಲೆಯಿಂದಾಗಿ ಗಾಯಗೊಂಡಿದ್ದ ದೇವ್ ಸ್ನೇಹಿತನ ಸಹಾಯದಿಂದ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಂದಿರಾನಗರ ಪೊಲೀಸರು ಇನ್ನು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.