ಬೆಂಗಳೂರು: ರಾಜ್ಯಾದ್ಯಂತ ರೋಗಿಗಳ ಪರದಾಟಕ್ಕೆ ಕಾರಣವಾಗಿರುವ ಕರ್ನಾಟಕ ಖಾಸಗಿ ವೈದ್ಯರ ಮುಷ್ಕರ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಇಷ್ಟುಕ್ಕೂ ಈ ಕೆಪಿಎಂಇ ಕಾಯ್ದೆಯಲ್ಲಿ ಅಂತಹುದೇನಿದೆ?
ಹೌದು..ರಾಜ್ಯ ಸರ್ಕಾರ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವ ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಕತ್ತರಿ ಹಾಕಿ ಏಕರೂಪದ ವೈದ್ಯಕೀಯ ಸೇವೆಗಳ ದರ ಜಾರಿಗಾಗಿ ಸರ್ಕಾರ ಕೆಪಿಎಂಇ ತಿದ್ದುಪಟಿ ವಿಧೇಯಕ ಮಂಡನೆಗೆ ಮುಂದಾಗಿದೆ. ಇದೇ ಕಾರಣಕ್ಕೆ ಈ ಕಾಯ್ದೆ ಇದೀಗ ಖಾಸಗಿ ವೈದ್ಯರ ಮುಷ್ಕರಕ್ಕೆ ಕಾರಣವಾಗಿದೆ. ಆದರೆ ಕಾಯ್ದೆ ಕುರಿತ ಹಲವು ಗೊಂದಲಗಳು ಹಾಗೂ ಊಹಾಪೋಹಗಳು ವೈದ್ಯರ ಪ್ರತಿಭಟನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ವೈದ್ಯರ ವೃತ್ತಿಗೆ ಮಾರಕವಾಗುವ ಯಾವುದೇ ರೀತಿಯ ಅಂಶಗಳು ತಿದ್ದುಪಡಿ ಕಾಯ್ದೆಯಲ್ಲಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡುತ್ತಿದ್ದರೂ, ಖಾಸಗಿ ಆಸ್ಪತ್ರೆ ವೈದ್ಯರು ಮಾತ್ರ ಇನ್ನೂ ತಮ್ಮ ಪ್ರತಿಭಟನೆ ಕೈ ಬಿಟ್ಟಿಲ್ಲ. ಇನ್ನು ಈಗಾಗಲೇ ರಾಜ್ಯ ಸರ್ಕಾರ ಕೆಪಿಎಂಇ ತಿದ್ದುಪಡಿ ಕಾಯ್ದೆಯಲ್ಲಿ ವಿವಾದಕ್ಕೆ ಕಾರಣವಾಗ ಬಲ್ಲ ಅಥವಾ ಖಾಸಗಿ ವೈದ್ಯರ ವಿರೋಧಕ್ಕೆ ಕಾರಣವಾಗಬಲ್ಲ ಅಂಶಗಳನ್ನು ಕೈಬಿಟ್ಟಿರುವುದಾಗಿ ಹೇಳಿದೆ. ಹೀಗಿದ್ದೂ ಪ್ರತಿಭಟನೆ ಮಾತ್ರ ಮುಂದುವರೆದಿದೆ.
ಇಷ್ಟಕ್ಕೂ ಈ ಕಾಯ್ದೆಯಲ್ಲಿರುವ ಪ್ರಮುಖಾಂಶಗಳು ಮತ್ತು ವೈದ್ಯರ ಗೊಂದಲಕ್ಕೆ ಕಾರಣವಾಗಿರಬಹುದಾದ ಅಂಶಗಳೇನು?
1.ಚಿಕಿತ್ಸೆ ವಿಫಲವಾದರೆ ವೈದ್ಯರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂಬ ಗೊಂದಲವಿದೆ. ಆದರೆ ತಿದ್ದುಪಡಿ ಕಾಯ್ದೆಯಲ್ಲಿ ಅಂತಹ ಯಾವುದೇ ಅಂಶಗಳಿಲ್ಲ ಎಂದು ಸರ್ಕಾರ ಹೇಳಿದೆ. ತಪ್ಪು ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ವಿಚಾರಣೆ ಅಧಿಕಾರ ದೂರು ನಿವಾರಣಾ ಸಮಿತಿಗೆ ಇದೆಯಾದರೂ ಶಿಕ್ಷೆ ನೀಡುವ ಅಧಿಕಾರವಿಲ್ಲ. ಈ ಸಮಿತಿಗೆ ಕೆಳಹಂತ ನ್ಯಾಯಾಲದ ಅಧಿಕಾರ ಮಾತ್ರ ಇದೆ.
2.ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ದರ ಜಾರಿಗೆ ಸರ್ಕಾರ ಮುಂದಾಗಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ಅಂಶಗಳೂ ಕಾಯ್ದೆಯಲ್ಲಿಲ್ಲ. ಆಸ್ಪತ್ರೆ ಇರುವ ಸ್ಥಳ, ಆಸ್ಪತ್ರೆ ನೀಡುವ ಸೌಲಭ್ಯ ಮತ್ತು ವೈದ್ಯರ ಅಭಿಪ್ರಾಯಗಳ ಆಧಾರ ಮೇಲೆ ಆಯಾ ಆಸ್ಪತ್ರೆಗಳ ದರ ನಿಗದಿ ಪಡಿಸಲಾಗುತ್ತದೆ.
3.ಇನ್ನು ಕೆಪಿಎಂಇ ಕಾಯ್ದೆಯಲ್ಲಿ ದೂರು ನಿವಾರಣಾ ಸಮಿತಿಯಲ್ಲಿ ವೈದ್ಯರಿಗೆ ಅವಕಾಶವಿಲ್ಲ ಎಂಬುದು ತಪ್ಪು ಗ್ರಹಿಕೆ. ವಾಸ್ತವವಾಗಿ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಓರ್ವ ಖಾಸಗಿ ಆಸ್ಪತ್ರೆ ವೈದ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.
4.ದೂರು ನಿವಾರಣಾ ಸಮಿತಿಗೆ ಹೋದಾಗ ವಾದ ಮಂಡಿಸಲು ಖಾಸಗಿ ವೈದ್ಯರಿಗೆ ಮಾತ್ರವಲ್ಲ, ರೋಗಿಗಳಿಗೂ ವಕೀಲರನ್ನು ಇಟ್ಟುಕೊಳ್ಳುವ ಅವಕಾಶವಿಲ್ಲ. ವಕೀಲರಿದ್ದರೆ ವಿಚಾರಣೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಖುದ್ಧು ಸಂತ್ರಸ್ಥರೇ ದೂರು ನಿವಾರಣಾ ಸಮಿತಿ ಮುಂದೆ ಅಳಲು ತೋಡಿಕೊಳ್ಳಲು ಅವಕಾಶ ನೀಡಲಾಗಿದೆ.
5.ದೂರು ನಿವಾರಣಾ ಸಮಿತಿ ಇರುವುದು ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸಲು ಆಲ್ಲ ಖಾಸಗಿ ವೈದ್ಯರನ್ನು ನೇರವಾಗಿ ನಿಯಂತ್ರಸಲು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos