ಕೋಲಾರ; ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಖಾಸಗಿ ವೈದ್ಯರು ಶುಕ್ರವಾರ ಕೂಡ ಪ್ರತಿಭಟನೆಯನ್ನು ನಡೆಸಿದ ಹಿನ್ನಲೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರಕದೆ ರಾಜ್ಯದ ವಿವಿಧೆಡೆ ಒಟ್ಟು 7 ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ.
ಬೆಂಗಳೂರು ಸೇರಿದಂತೆ ಇತರೆ ಕೆಲ ಜಿಲ್ಲೆಗಳಲ್ಲಿ ಖಾಸಗಿ ವೈದ್ಯರು ಮುಷ್ಕರವನ್ನು ಹಿಂಪಡೆದಿದ್ದರೂ, ಕೆಲ ಆಸ್ಪತ್ರೆಗಳು ಮುಷ್ಕರವನ್ನು ಮುಂದುವರೆಸಿದ್ದವು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ರಾಜ್ಯದ ವಿವಿಧೆಡೆಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.
ಮೂರು ತಿಂಗಳ ಮಗು ಸೇರಿದಂತೆ ಮೂವರು ಆಸ್ಪತ್ರೆಗಳಲ್ಲಿ ಅಲೆಯುತ್ತಲೇ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಸಾವನ್ನಪ್ಪಿದ್ದಾರೆ. ಇನ್ನು ಯಾದಗಿರಿಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರಿಂದಾಗಿ ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆ.
ಗದಗ ಜಿಲ್ಲೆಯಲ್ಲಿ ಗಜೇಂದ್ರಗದ್'ನಲ್ಲಿ ನವ ವಿವಾಹಿತ ವ್ಯಕ್ತಿಯೊಬ್ಬರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದಲೂ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ರವಿ ವೀರಪ್ಪ ಭಜಂತ್ರಿಯವರು ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಅತೀವ ಜ್ವರದಿಂದ ಬಳಲುತ್ತಿದ್ದ ರವಿಯವರನ್ನು ಕುಟುಂಬ ಸದಸ್ಯರು ಸಾಕಷ್ಟು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಎಲ್ಲಿಯೂ ಚಿಕಿತ್ಸೆ ದೊರಕಿಲ್ಲ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವ್ಯವಸ್ಥೆಗಳಿಲ್ಲದ ಕಾರಣ ಗದಗ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇಲೆಗೆ ರವಿ ಅವರನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ವೇಳೆ ಬೆಳಿಗ್ಗೆ 11.30ರ ಸುಮಾರಿಗೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಭಾನುವಾರವಷ್ಟೇ ರವಿ ಭಜಂತ್ರಿಯವರು ವಿವಾಹವಾಗಿದ್ದರು.
ಮಂಗಳೂರಿನ ಪುತ್ತೂರಿನಲ್ಲಿ 20 ವರ್ಷದ ಯುವತಿಯೊಬ್ಬಳಿಗೆ ಸೂಕ್ತ ಸಮಯದಲ್ಲಿ ಡಯಾಲಿಸಿಸ್ ಮಾಡದ ಕಾರಣ ಮೃತಪಟ್ಟಿದ್ದಾರೆ.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಕಾಂ ವಿದ್ಯಾರ್ಥಿನಿ ಪೂಜಾ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಪರಿಸ್ಥಿತಿ ಚಿಂತಾಜನಕವಾಗಿದ್ದ ಹಿನ್ನಲೆಯಲ್ಲಿ ಪೂಜಾಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರಾರೂ ಇರಲಿಲ್ಲ. ಚಿಂತಾಮಣಿಯಲ್ಲಿ ಪೂಜಾ ಮೃತಪಟ್ಟಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಇದರಂತೆ ಕೋಲಾರ ವೈದ್ಯಕೀಯ ಆಸ್ಪತ್ರೆಯಲ್ಲಿ 3 ತಿಂಗಳ ಮಗು ಮೃತಪಟ್ಟಿದೆ. ಅತೀವ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos