ಬೆಂಗಳೂರು: ಸುಟ್ಟಗಾಯಗಳಿಂದ ಬಳಲುವ ಸಂತ್ರಸ್ತರಿಗೆ ಉದ್ಯೋಗ, ಪರಿಹಾರ, ಮನೆ, ಹಾಗೂ ಜೀವ ವಿಮಾ ಪಾಲಿಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರ ಚಿಂತಿಸಿದ್ದು, ಈ ಸಂಬಂಧ ನೂತನ ಪಾಲಿಸಿ ತರಲು ಸಿದ್ದತೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಕೆ. ರಮೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಎನ್ ಜಿಒ ಸಂಸ್ಥೆ ವಿಮೋಚನಾ ಜೊತೆ ನಡೆದ ಸಭೆಯ ನಂತರ ಮಾತನಾಡಿದ ರಮೇಶ್ ಕುಮಾರ್, ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ಹೊಸ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಕಳೆದ ಎರಡು ದಶಕಗಳಿಂದ ವಿಮೋಚನಾ ಸಂಸ್ಥೆಯು ಸುಟ್ಟಗಾಯಗಳಿಂದ ಬಳಲುತ್ತಿರುವ ಸಂತ್ರಸ್ತರಿಗಾಗಿ ಕೆಲಸ ಮಾಡುತ್ತಿದೆ. ಸಂತ್ರಸ್ತರಿಗೆ ವಸತಿ, ಉದ್ಯೋಗ ಸೇರಿದಂತೆ ಹಲವು ಸವಲತ್ತು ನೀಡುವ ಪಾಲಿಸಿ ಜಾರಿಗೆ ತರುವುದಾಗಿ ಹೇಳಿದ ರಮೇಶ್ ಕುಮಾರ್ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ.
ಆರೋಗ್ಯ ಇಲಾಖೆ ಜೊತೆ ಸೇರಿ ಸುಟ್ಟಗಾಯಗಳ ಸಂತ್ರಸ್ತರಿಗಾಗಿ ಕೆಲಸ ಮಾಡುವಂತೆ ಸಚಿವರು ಸೂಚಿಸಿದ್ದಾರೆ ಎಂದು ವಿಮೋಚನಾ ಎನ್ ಜಿ ಒ ಸಂಸ್ಥಾಪಕ ಡೊನ್ನಾ ಫರ್ನಾಂಡೀಸ್ ಹೇಳಿದ್ದಾರೆ.
ಪ್ರತಿಯೊಬ್ಬ ಸುಟ್ಟಗಾಯ ಸಂತ್ರಸ್ತರಿಗೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನೀಡುವಂತೆ 3 ಸಾವಿರ ರು, ಪರಿಹಾರ ನೀಡಲು ಸಚಿವರು ಸಮ್ಮತಿಸಿದ್ದಾರೆ, ಆದರೆ ನಾವು ಮೆಡಿಕಲ್ ಎಜುಕೇಷನ್ ಇಲಾಖೆಗೆ ಇನ್ನೂ 2 ಸಾವಿರ ರು ಹೆಚ್ಚುವರಿಯಾಗಿ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ಇರುವ ನೀತಿಯಲ್ಲಿ ಚಿಕಿತ್ಸಾ ವೆಚ್ಚದಲ್ಲಿ ಫಿಸಿಯೋಥೆರಪಿ ಸೇರಿಲ್ಲ, ಜೊತೆಗೆ ಟ್ರಾಮಾ ಸೆಂಟರ್, ಕೌನ್ಸೆಲಿಂಗ್, ಲಿಂಗ ಸಂಶೋಧನೆ ಮತ್ತು ಪುನರ್ವಸತಿಗಾಗಿ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ, ಆದರೆ ಈ ಹೊಸ ಯೋಜನೆಗೆ ನವೆಂಬರ್ ನಲ್ಲಿ ನಡೆಯುವ ಅಧಿವೇಶನದಲ್ಲಿ ಅನುಮೋದನೆ ಸಿಗುವವರೆಗೂ ಅದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ ಎಂದು ಡೊನ್ನಾ ಹೇಳಿದ್ದಾರೆ.
ರಾಜ್ಯದಲ್ಲಿ ಆರುವರೆ ಕೋಟಿ ಜನರಿದ್ದಾರೆ, ಅದರಲ್ಲಿ ಕೇವಲ ಎರಡು ಮಾತ್ರ ಸುಟ್ಟಗಾಯಗಳ ಚಿಕಿತ್ಸಾ ಘಟಕಗಳಿವೆ, ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋದಿ ಮತ್ತು ಸೇಂಟ್ ಜಾನ್ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಟ್ಟಗಾಯ ಚಿಕಿತ್ಸಾ ಘಟಕಗಳಾಗಿವೆ.
ಮಹಾಬೋದಿಯಲ್ಲಿ ಪ್ರತಿ ತಿಂಗಳು ಸುಮಾರು 180ರಿಂದ 200 ರೋಗಿಗಳಿಗೆ ಚಿಕಿತ್ಸೆ ಹಾಗೂ ಸೇಂಟ್ ಜಾನ್ ಆಸ್ಪತ್ರೆಯಲ್ಲಿ 150 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟಕಗಳಲ್ಲಿ ಕೇವಲ ಆರು ಬೆಡ್ ಗಳಿದ್ದು, ಇಡೀ ವರ್ಷ ಅದರಲ್ಲೇ ಚಿಕಿತ್ಸೆ ನೀಡಬೇಕಿದೆ. 2012 ರಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ 830 ಮಹಿಳೆಯರ ಪೈಕಿ 589 ಮಂದಿ ಸಾವನ್ನಪ್ಪಿದ್ದಾರೆ.
ಚರ್ಮವು ಅಥವಾ ಇತರ ಅಂಗಾಂಗಗಳಿಗೆ ಪ್ರಾಥಮಿಕ ಶಾಖದಿಂದ ಉಂಟಾಗುವ ಗಾಯ, ಹಾಗೂ ನೇರಳಾತೀತ ವಿಕಿರಣ, ವಿಕಿರಣಶೀಲತೆ, ವಿದ್ಯುತ್ ಅಥವಾ ರಾಸಾಯನಿಕಗಳು ಮತ್ತು ಹೊಗೆ ಉರಿಯೂತದಿಂದ ಶ್ವಾಶಕೋಶಕ್ಕೆ ಹಾನಿ ಉಂಟಾಗುವ ಗಾಯಗಳನ್ನು ಸುಟ್ಟಗಾಯಗಳೆಂದು ಪರಿಗಣಿಸಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.