ಅರಲೂರು ಕೆರೆಯಲ್ಲಿ ಮೃತ ಮೀನುಗಳು ತೇಲುತ್ತಿರುವುದು.
ಬೆಂಗಳೂರು: ಸೋಮಸುಂದರಪಾಳ್ಯದ ಅರಲೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಸುತ್ತಮುತ್ತಲ ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರಿನಿಂದ ಮೀನುಗಳು ಮೃತಪಟ್ಟಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಕಳೆದ ಮೂರು ದಿನಗಳಿಂದ ಮೀನುಗಳು ಕೆರೆಯಲ್ಲಿ ಸಾಯುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೀನುಗಳ ಸಾಕಣೆಗೆ ಕೆರೆಯನ್ನು ಭೋಗ್ಯಕ್ಕೆ ಪಡೆದಿದ್ದ ಶ್ರೀನಿವಾಸ್, ತಮಗೆ ಸುಮಾರು 15 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ. ನಾನು ಈ ಕೆರೆಯನ್ನು ಭೋಗ್ಯಕ್ಕೆ ಪಡೆದಿದ್ದು ಕಾಟ್ಲ ಮತ್ತು ರೊಹು ಮೀನನ್ನು ಸಾಕುತ್ತಿದ್ದೇನೆ. ಇದಕ್ಕೆ ಸಾಕಷ್ಟು ಬಂಡವಾಳ ಹಾಕಿದ್ದೇನೆ. ಕಳೆದ ಮೂರು ದಿನಗಳಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ. ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಿದ್ದೇನೆ, ಆದರೆ ಇದು ಒಳ ಚರಂಡಿ ನೀರಿನ ಸೇರ್ಪಡೆಯಿಂದಾಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎನ್ನುತ್ತಾರೆ.
ಅಕ್ಕಪಕ್ಕದ ಕೈಗಾರಿಕೆಗಳಿಂದ, ಅಪಾರ್ಟ್ ಮೆಂಟ್ ಗಳಿಂದ ನೀರನ್ನು ಶುದ್ಧೀಕರಿಸದೆ ಕೆರೆಗೆ ಬಿಡಲಾಗುತ್ತಿದೆ.
ಕಳೆದ ವರ್ಷ ಅಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳು ಹೀಗೆ ಮೃತಪಟ್ಟಿದ್ದವು.