ರಾಜ್ಯ

ಬನ್ನೇರುಘಟ್ಟ: ಬಿಳಿ ಹುಲಿಗೆ ಆಹಾರ ನೀಡಲು ತೆರಳಿದ್ದವರೆ ಹುಲಿಗೆ ಆಹಾರವಾದ್ರು!

Vishwanath S
ಬನ್ನೇರುಘಟ್ಟ(ಆನೇಕಲ್): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ನೌಕರನೇ ಹುಲಿಗಳಿಗೆ ಆಹಾರವಾಗಿರುವ ದಾರುಣ ಘಟನೆ ನಡೆದಿದೆ. 
ಬಿಳಿ ಹುಲಿಗಳಿಗೆ 45 ವರ್ಷದ ಗೇಟ್ ಕೀಪರ್ ಆಂಜನೇಯ ಎಂಬುವರು ನಿನ್ನೆ ಸಂಜೆ 5.30ರ ಸುಮಾರಿಗೆ ಆಹಾರ ನೀಡಿದ್ದರು. ಮತ್ತೊಮ್ಮೆ ಆಹಾರ ಪರೀಕ್ಷಿಸಲು ಆವರಣಕ್ಕೆ ಪ್ರವೇಶಿಸಿದಾಗ ಒಂದು ವರ್ಷದ ಎರಡು ಮರಿ ಹುಲಿಗಳು ಅವರ ಮೇಲೆ ದಾಳಿ ಮಾಡಿದೆ. 
ಮರಿ ಹುಲಿಗಳ ದಾಳಿಯಿಂದ ಕುಸಿದು ಬಿದ್ದ ಆಂಜನೇಯ ಮೇಲೆ ದೊಡ್ಡ ಹುಲಿಗಳು ದಾಳಿ ನಡೆಸಿವೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 
ಆಂಜನೇಯ ಅವರು ಉದ್ಯಾನದ ಸಮೀಪದಲ್ಲಿರುವ ಹಕ್ಕಿಪಿಕ್ಕಿ ಕಾಲನಿಯವರು. ಬೇರೆಡೆ ನಿಯೋಜನೆಗೊಂಡಿದ್ದ ಇವರನ್ನು ಅಕ್ಟೋಬರ್ 1ರಿಂದ ಬಿಳಿ ಹುಲಿ ಸಫಾರಿ ಸ್ಥಳದಲ್ಲಿ ಗೇಟ್ ಕೀಪರ್ ಆಗಿ ನೇಮಕ ಮಾಡಲಾಗಿತ್ತು. ಹುಲಿ ನೋಡಿಕೊಳ್ಳಲು ನುರಿತ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. ಆದರೆ ಆಂಜನೇಯ ಅವರಿಗೆ ಈ ಅನುಭವ ಇರಲಿಲ್ಲ ಇದೇ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 
SCROLL FOR NEXT