ಉಡುಪಿ: ಬೈಕ್ ಅಪಘಾತದಿಂದ ತನ್ನ ಮಗುವಿನ ಸಾವಿಗೆ ಕಾರಣನಾದ ತಂದೆಯನ್ನು ಉಡುಪಿ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅ.2ರಂದು ಮಣಿಪಾಲದಿಂದ ಹಿರಿಯಡ್ಕ ಕಡೆ ಬರುವಾಗ ಈ ಘಟನೆ ಸಂಭವಿಸಿದೆ. ಅಂದು ಉಮೇಶ್ ಪೂಜಾರಿ ಮತ್ತು ಆತನ ಪತ್ನಿ, ಮತ್ತು ಹದಿನೆಂಟು ತಿಂಗಳ ಮಗು ಬೈಕ್ ನಲ್ಲಿ ಹಿರಿಯಡ್ಕದ ಕಡೆ ಬರುವಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗಿದೆ. ಅಪಘಾತದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟರೆ ದಂಪತಿಗಳು ಸಣ್ಣ ಪುಟ್ಟ ಗಾಯಗಳೊಡನೆ ಪಾರಾಗಿದ್ದಾರೆ.
ಮಗುವನ್ನು ಕಳೆದುಕೊಂಡ ಆಘಾತದಿಂದ ದಂಪತಿಗಳು ಹೊರಬರುವಷ್ಟರಲ್ಲಿ ಉಮೇಶ್ ಅವರ ಮೇಲೆ ಐಪಿಸಿ ಸೆ.279- ರ್ಯಾಶ್ ಡ್ರೈವಿಂಗ್ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿರುವುದು ತಿಳಿದಿದೆ. ಉಮೇಶ್ ಅಳಿಯನಾದ ಕೃಷ್ಣ ಪೂಜಾರಿ ಮಣಿಪಾಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಉಡುಪಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಡಾ. ಸಂಜೀವ್ ಪಾಟೀಲ್ ಹೇಳುವಂತೆ "ಅಪಘಾತ ದ ಪ್ರಕರಣದಲ್ಲಿ ಮಗುವಿನ ತಂದೆಯನ್ನು ಬುಕ್ ಮಾಡುವ ಅವಕಾಶವಿದೆ. ಆದರೆ ಇವರ ಮೇಲೆ ಏಕೆ ಆಪಾದನೆ ಮಾಡಲಾಗಿದೆ ಎಂಬುದರ ಬಗ್ಗೆ ನಾನು ಹೇಳಲಾರೆ. ಇದು ರಸ್ತೆ ನಿರ್ಮಿಸಿದ ಇಂಜಿನಿಯರ್ ದೋಷವೊ ಅಥವಾ ಸತ್ತ ಮಗುವಿನ ತಂದೆ ಉಮೇಶ್ ರವರ ವೇಗದ ಚಾಲನೆಯ ಕಾರಣವೋ ಎಂದು ಖಚಿತಪಡಿಸಿಕೊಳ್ಳಬೇಕು. ತನಿಖೆ ಮುಂದುವರೆದಂತೆ ಅದು ಸ್ಪಷ್ಟವಾಗುತ್ತದೆ."
ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ಕೆಲವು ತಿಂಗಳುಗಳಿಂದಲೂ ಅಪಘಾತ ಪ್ರಕರಣಗಳು ಮರುಕಳಿಸುತ್ತಲಿದೆ.
ಎನ್ಎಚ್ಎಐ ಅಧಿಕಾರಿಗಳಿಂದ ದಾಖಲೆಗಳನ್ನು ಸಂಗ್ರಹಿಸುತ್ತೇವೆ. ರಸ್ತೆ ದುರವಸ್ಥೆಗೆ ಅವರ ನಿರ್ಲಕ್ಷ್ಯವೇ ಕಾರಣವೆಂದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.