ಬೆಂಗಳೂರು: ನೈಋತ್ಯ ಮುಂಗಾರು ಕ್ಷೀಣಿಸುತ್ತಿದ್ದಂತೆ ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 5 ದಿನಗಳ ಕಾಲ ರಾಜ್ಯದ ನಾನಾ ಕಡೆ ಸಾಕಷ್ಟು ಮಳೆ ಆಗಲಿದೆ.
ಏತನ್ಮಧ್ಯೆ, ದಕ್ಷಿಣ ಬೆಂಗಳೂರಿನ ಭಾಗಗಳಲ್ಲಿ ಮಂಗಳವಾರ ಮತ್ತು ಬುಧವಾರದಂದು ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಎಸ್.ಎಸ್.ಎಂ. ಗವಾಸ್ಕರ್ ಅವರು ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆ ಮುನ್ಸೂಚನೆ ಇದೆ ಎಂದು ತಿಳಿಸಿದ್ದಾರೆ. "ನೈಋತ್ಯ ಮುಂಗಾರು ಕ್ಷೀಣಿಸುವ ಮುನ್ನ ಅವಧಿಯಲ್ಲಿ, ದಕ್ಷಿಣ ಒಳನಾಡು ಪ್ರದೇಶದಲ್ಲಿ ಸಾಮಾನ್ಯವಾಗಿ ಉತ್ತಮ ಮಳೆ ಆಗಲಿದೆ"
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ತೀರದಲ್ಲಿ ಈ ಅವಧಿಯಲ್ಲಿ ಉತ್ತಮ ಮಳೆ ಬೀಳುವ ವಾತಾವರಣವಿದ್ದು ಇದರಿಂದ ರಾಜ್ಯದಲ್ಲಿಯೂ ಮಳೆ ಆಗಲಿದೆ. ಗೋವಾದ ಉತ್ತರ ಬಾಗ ಮತ್ತು ಮಧ್ಯ ಮಹಾರಾಷ್ಟ್ರ ಗಳಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಬೀಸುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.
ನೈರುತ್ಯ ಮಾನ್ಸೂನ್ ನಿಧಾನವಾಗಿ ಹಿಂದೆ ಸರಿಯುತ್ತಿದ್ದು ಅ.15 ರಿಂದ 18 ರ ನಡುವೆ ರಾಜ್ಯದಿಂದ ದೂರಾಗುವ ಸಾಧ್ಯತೆ ಇದೆ ಎಂಡರು.