ರಾಜ್ಯ

ಹೊಸ ವರ್ಷಕ್ಕೆ ಸಿಎಂ ಗಿಫ್ಟ್: ಜನವರಿ 1 ರಿಂದ ಎಲ್ಲಾ ತಾಲೂಕುಗಳಲ್ಲೂ ಇಂದಿರಾ ಕ್ಯಾಂಟೀನ್

Shilpa D
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸಿಗುತ್ತಿರುವ ಉತ್ತೇಜನದಿಂದ ಪ್ರೇರಿತಗೊಂಡಿರುವ ಸಿದ್ದಕಾಮಯ್ಯ ಎಲ್ಲಾ ತಾಲೂಕುಗಳಲ್ಲಿಯೂ ಜನವರಿ 1 ರಿಂದ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಲ್ಲಿನ ಆಸ್ಪತ್ರೆಗಳ ಆವರಣ, ರೈಲು ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳ ಬಳಿ ಕ್ಯಾಂಟೀನ್‌ ತೆರೆಯಲಾಗುವುದು’ ಎಂದು ತಿಳಿಸಿದರು.
‘171 ಸ್ಥಳಗಳಲ್ಲಿನ 246 ಕೇಂದ್ರಗಳಲ್ಲಿ ಕ್ಯಾಂಟೀನ್‍ಗಳು ಆರಂಭವಾಗಲಿದೆ. ನವೆಂಬರ್ ತಿಂಗಳ ಅಂತ್ಯದೊಳಗೆ ಸೂಕ್ತ ಸ್ಥಳ ಗುರುತಿಸಬೇಕು, ಡಿಸೆಂಬರ್ 17ರ ಒಳಗೆ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ ಎಂದರು.
ಈ ಯೋಜನೆಗೆ ಪ್ರತಿ ದಿನ ತಲಾರು. 29 ಲಕ್ಷದಂತೆ, ಪ್ರತಿ ತಿಂಗಳು ಸುಮಾರು ರು 189 ಕೋಟಿ  ಸಹಾಯ ಧನ ಬಿಡುಗಡೆ ಮಾಡಲು ಸಂಪುಟ ಅನುಮೋದನೆ ನೀಡಿದೆ’ ಎಂದು ಅವರು ವಿವರಿಸಿದರು.
ಆರೋಗ್ಯ ಕವಚ ಯೋಜನೆಯ ಹಳೆಯ 95 ಆಧುನಿಕ ಜೀವ ರಕ್ಷಕ ವ್ಯವಸ್ಥೆ (ಅಡ್ವಾನ್ಸ್ ಲೈಫ್ ಸಪೋರ್ಟರ್ಸ್) ಮತ್ತು 276 ಮೂಲ ಜೀವರಕ್ಷಕ ವ್ಯವಸ್ಥೆ (ಬೇಸಿಕ್ ಲೈಫ್ ಸಪೋರ್ಟರ್ಸ್) ಆಂಬ್ಯುಲೆನ್ಸ್‌ಗಳನ್ನು ಬದಲಿಸಿ ರು. 61.78 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಂಬ್ಯುಲೆನ್ಸ್‌ಗಳ ಖರೀದಿಸಲು ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.
ಕರ್ತವ್ಯ ನಿರತ ಸರ್ಕಾರಿ ವೈದ್ಯರಿಗೆ ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಕೋಲಾರ, ಕಲಬುರ್ಗಿ, ತುಮಕೂರು, ವಿಜಯಪುರ ಹಾಗೂ ಬೆಂಗಳೂರಿನ ಕೆ.ಸಿ. ಜನರಲ್ ಮತ್ತು ಜಯನಗರ ಸಾರ್ವಜನಿಕ ಆಸ್ಪತೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಇನ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ಕೋರ್ಸ್‌ ಆರಂಭಿಸಲು ಒಪ್ಪಿಗೆ ನೀಡಲಾಗಿದೆ.
SCROLL FOR NEXT