ಹಾಸನ: ಹಾಸನ ನಗರದ ಅಧಿದೇವತೆ, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಗುರುವಾರ ಮಧ್ಯಾಹ್ನ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ನಾಳೆಯಿಂದ ಭಕ್ತರು ಅಹೋರಾತ್ರಿ ದರ್ಶನ ಪಡೆಯಬಹುದಾಗಿದೆ.
ಇಂದಿನಿಂದ ಅಕ್ಟೋಬರ್ 21 ರ ವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ಇಂದು ಮತ್ತು ಅಕ್ಟೋಬರ್ 21ರಂದು ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ. ಈ ಬಾರಿ ಭಕ್ತರು ಮಧ್ಯಾಹ್ನ 1.30 ರಿಂದ 3.30 ರವರೆಗಿನ ಸಮಯ ಹೊರತು ಪಡಿಸಿ ಅಹೋರಾತ್ರಿ ತಾಯಿಯ ದರ್ಶನ ಭಾಗ್ಯ ಪಡೆಯಬಹುದು.
ಈಗಿನ ಹಾಸನ ನಗರವು 12ನೇ ಶತಮಾನದಲ್ಲಿ ಸಿಂಹಾಸನಪುರಿ ಎಂದು ಪ್ರಸಿದ್ಧವಾಗಿತ್ತು. ಕೃಷ್ಣಪ್ಪನಾಯಕ ಎಂಬ ಪಾಳೇಗಾರ ನಗರವನ್ನಾಳುತ್ತಿದ್ದ. ಹಾಸನ ತಾಲ್ಲೂಕಿನಲ್ಲಿರುವ ಕುದುರುಗುಂಡಿಯ ವೀರಭದ್ರೇಶ್ವರ ದೇವಾಲಯದ ಮುಂದೆ ಸಪ್ತಮಾತೃಕೆಯರ ವಿಗ್ರಹಗಳಿದ್ದು, ಇವರು ಹಾಸನಾಂಬೆಯ ಸಹೋದರಿಯರು ಎಂದು ನಂಬಲಾಗಿದೆ.
ಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಆವರಣದಲ್ಲಿ ಹಾಸನಾಂಬೆ ಇತಿಹಾಸದ ಬಗ್ಗೆ ತಿಳಿಸಲಾಗುತ್ತದೆ. ಮೊದಲ ಬಾರಿಗೆ ದೇವಾಲಯದ ಆವರಣದಲ್ಲಿ ಸಿಂಹಾಸನಪುರಿಯ ಐತಿಹಾಸಿಕ ಕಥೆಯ ಬಗ್ಗೆ ಮಾಹಿತಿ (ಹಾಸನ) ಬಿತ್ತರಿಸಲಾಗುವುದು.
ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಜನರಲ್ ಪಾಸ್, ನೀಡುವುದನ್ನು ನಿಲ್ಲಿಸಿದೆ. ಸ್ಥಳೀಯ ರಾಜಕಾರಣಿಗಳು ಹಾಗೂ ಸಂಸದರು ಮತ್ತವರ ಕುಟುಂಬಸ್ಥರಿಗೆ ಮಾತ್ರ ವಿಐಪಿ ಪಾಸ್ ನೀಡಲಾಗುತ್ತಿದೆ. ಜೊತೆಗೆ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸುವುದನ್ನು ನಿಲ್ಲಿಸಿದೆ, ಮುಜರಾಯಿ ಇಲಾಖೆ ಪುಳಿಯೊಗರೆ, ಪೊಂಗಲ್, ರೈಸ್ ಬಾತ್, ಪಾಯಸ ಸೇರಿದಂತೆ 5 ಬಗೆಯ ಪ್ರಸಾದವನ್ನು ಚನ್ನಕೇಶವ ದೇವಾಲಯದಲ್ಲಿ ನೀಡಲಿದೆ.
40 ರು ಪಾವತಿಸಿ ಭಕ್ತಾದಿಗಳು ಲಡ್ಡು ಪ್ರಸಾದ ಪಡೆಯಬಹುದಾಗಿದೆ, ವಯಸ್ಸಾದವರಿಗೆ, ಅಂಗವಿಕಲರಿಗೆ ಯಾವುದೇ ವಿಶೇಷ ದರ್ಶನದ ಅವಕಾಶ ನೀಡಿಲ್ಲ, ಗರ್ಭಿಣಿ ಮಹಿಳೆಯರು ಸೇರಿದಂತೆ ಎಲ್ಲರೂ ಸಾಮಾನ್ಯ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬಹುದಾಗಿದೆ.
ಕಳೆದ ವರ್ಷ8 ಲಕ್ಷ ಮಂದಿ ದೇವಾಲಯಕ್ಕೆ ಭೇಟಿ ನೀಡಿದ್ದು, 2.67 ಕೋಟಿ ರು ಹಣ ಸಂಗ್ರಹವಾಗಿತ್ತು. ಈ ಬಾರಿ 9 ಲಕ್ಷ ಭಕ್ತರನ್ನು ನಿರೀಕ್ಷಿಸಲಾಗಿದ್ದು, 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos