ಪಿರಿಯಾಪಟ್ಟಣ: ಬ್ಯಾಂಕ್ ಸಿಬ್ಬಂದಿ ಎಂದು ಭಾವಿಸಿ ಅಪರಿಚಿತ ವ್ಯಕ್ತಿಗೆ ತನ್ನ ಎಟಿಎಂ ಪಿನ್ ಮಾಹಿತಿ ನೀಡಿದ್ದ ಶಿಕ್ಷಕಿಯೊಬ್ಬರು ಖಾತೆಯಲ್ಲಿದ್ದ 68 ಸಾವಿರ ನಗದನ್ನು ಕಳೆದುಕೊಂಡಿದ್ದಾರೆ.
ಪಿರಿಯಾಪಟ್ಟಣದ ಹುಣಸೇಕುಪ್ಪೆ ಅಂಗನವಾಡಿ ಶಿಕ್ಷಕಿ ಎಸ್.ಆರ್. ಸುನಂದಾ ಹಣ ಕಳೆದುಕೊಂಡ ನತದೃಷ್ಟೆಯಾಗಿದ್ದು ಪಿರಿಯಾಪಟ್ಟಣದ ಎಸ್ ಬಿಐ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು.
ಮಂಗಳವಾರ ಶಿಕ್ಷಕಿಯ ಮೊಬೈಲ್ ಗೆ ಕರೆ ಮಾಡಿದ್ದ ವಂಚಕ "ನಾವು ಎಸ್ಬಿಐ ಬ್ಯಾಂಕ್ನಿಂದ ಕರೆಮಾಡುತ್ತಿದ್ದೇವೆ. ನಿಮ್ಮ ಎಟಿಎಂ ಬ್ಲಾಕ್ ಆಗಿದೆ. ಮತ್ತೆ ಅದನ್ನು ನವೀಕರಣ ಮಾಡಬೇಕು" ಎನ್ನುವ ಮೂಲಕ ಕಾರ್ಡ್ ನಂಬರ್, ಪಾಸ್ವರ್ಡ್ ನಂಬರ್ ಮಾಹಿತಿಯನ್ನು ಪಡೆದಿದ್ದಾನೆ. ಆ ಬಳಿಕ ಬ್ಯಾಂಕ್ ನಿಂದ ಬಂದ ಒಟಿಪಿ ನಂಬರ್ ಸಹ ದಾಖಲಿಸಿಕೊಂಡಿದ್ದಾನೆ.
ಇದಾದ ಕೆಲವೇ ಸಮಯಕ್ಕೆ ಖಾತೆಯಲ್ಲಿದ್ದ ಹಣ ಡ್ರಾ ಆದ ಮೆಸೇಜ್ ಸಿಕ್ಕಿದ್ದು ಪ್ರಾರಂಭದಲ್ಲಿ 500 ರೂ. ಬಳಿಕ 10 ಸಾವಿರ ಹೀಗೆ ಒಟ್ಟಾರೆ ಖಾತೆಯಲ್ಲಿ ಇದ್ದ 68 ಸಾವಿರ ರೂ. ನ್ನು ವಂಚಕ ಎಗರಿಸಿದ್ದಾನೆ. ಹಣ ಡ್ರಾ ಆದ ಮೆಸೇಜ್ ನೋಡಿದ್ದ ಶಿಕ್ಷಕಿಗೆ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಆಘಾತವಾಗಿದೆ. ತಕ್ಷಣ ಆಕೆ ಪಿರಿಯಾಪಟ್ಟಣದ ಪೊಲೀಸ್ ಠಾಣೆಗೆ ಮತ್ತು ಎಸ್ಬಿಐ ಬ್ಯಾಂಕ್ಗೆ ದೂರು ನೀಡಿದ್ದಾರೆ.
ಈ ಹಿಂದೆ 2016ನೇ ಮೇ ತಿಂಗಳಿನಲ್ಲಿ ಕೆನರಾ ಬ್ಯಾಂಕ್ ಪಿರಿಯಾಪಟ್ಟಣ ಶಾಖೆಯಲ್ಲಿ ಖಾತೆ ಹೊಂದಿದ್ದ ಶಿಕ್ಷಕಿಯೊಬ್ಬರು ಇದೇ ರೀತಿ 44 ಸಾವಿರ ರೂ. ಕಳೆದುಕೊಂಡು ವಂಚನೆಗೆ ಒಳಗಾಗಿದ್ದರು. ಇದು ಎರಡನೇ ಪ್ರಕರಣ ಎನ್ನುವುದಾಗಿ ಪಿರಿಯಾಪಟ್ಟಣ ಪೋಲೀಸರು ಮಾಹಿತಿ ನಿಡಿದ್ದಾರೆ.