ಬೆಂಗಳೂರು: ಕರ್ನಾಟಕದಲ್ಲಿ ಸದ್ಯದಲ್ಲಿಯೇ ವೈದ್ಯಕೀಯ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಸತ್ಯಜಿತ್ ರಾಜನ್ ತಿಳಿಸಿದ್ದಾರೆ.
ರಾಜ್ಯವನ್ನು ವೈದ್ಯಕೀಯ ಮೌಲ್ಯಯುತ ಪ್ರವಾಸ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಮತ್ತು ಪ್ರವಾಸೋದ್ಯಮವನ್ನು ಪ್ರಚಾರ ಮಾಡಲು ಹಣಕಾಸಿನ ನೆರವು ಒದಗಿಸಲು ಮಾರುಕಟ್ಟೆ ನಿಧಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಏಷ್ಯಾ ಖಂಡದಲ್ಲಿ ಭಾರತ ಪ್ರಮುಖ ವೈದ್ಯಕೀಯ ಮೌಲ್ಯಯುತ ಪ್ರವಾಸ ದೇಶವಾಗಿದ್ದು ಇಲ್ಲಿ ವರ್ಷಕ್ಕೆ 5 ಲಕ್ಷಕ್ಕೂ ಅಧಿಕ ವಿದೇಶಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಏಷ್ಯಾದಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಗಳೂರುಗಳಲ್ಲಿ ಉತ್ತಮ ಆಸ್ಪತ್ರೆಗಳಿವೆ. ಉಡುಪಿ, ಗೋಕರ್ಣ, ಮೈಸೂರು ಮತ್ತು ಬಿಜಾಪುರಗಳು ಆರೋಗ್ಯ ಸೇವೆಯಲ್ಲಿ ಅಭಿವೃದ್ಧಿ ಕಂಡಿವೆ ಎಂದು ಹೇಳಿದರು.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿನ್ನೆ ಅಡ್ವಾಂಟೇಜ್ ಹೆಲ್ತ್ ಕೇರ್ ಇಂಡಿಯಾದ 3ನೇ ಅಂತಾರಾಷ್ಟ್ರೀಯ ಸಮ್ಮೇಳನನದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ ಹೆಲ್ತ್ ಟೂರಿಸಂಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವ ನೀತಿ ಪರಿಚಯಿಸಿದೆ. ಆದ್ದರಿಂದ ಇಲ್ಲಿನ ವೈದ್ಯಕೀಯ ಪ್ರವಾಸೋದ್ಯಮ ಮಾದರಿಯಲ್ಲಿ ಸುಧಾರಿತ ನೀತಿಯನ್ನು ಮುಂದಿನ ವರ್ಷ ಪರಿಚಯಿಸಲಾಗುವುದು. ಆ ಮೂಲಕ ದೇಶದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಅನುಕೂಲ ಕಲ್ಪಿಸಲಾಗುವುದು ಎಂದರು.