ಮೃತ ಯುವತಿ ನರಸಮ್ಮ ಮನೆಯ ಅಕ್ಕಪಕ್ಕದ ಮಹಿಳೆಯರು ದುಃಖತಪ್ತರಾಗಿರುವುದು
ಬೆಂಗಳೂರು: ನಗರದ ಮಹಾಮಳೆಗೆ ಸಿವಿ ರಾಮನ್ ನಗರದ ಬಾಗ್ಮನೆ ಟೆಕ್ ಪಾರ್ಕ್ ಹಿಂಭಾಗದಲ್ಲಿರುವ ಚರಂಡಿಯಲ್ಲಿ 16 ವರ್ಷದ ಬಾಲಕಿ ನರಸಮ್ಮ ಕೊಚ್ಚಿಹೋಗಿದ್ದಾಳೆ.
ಇಲ್ಲಿನ ನಿವಾಸಿಗಳ ದೌರ್ಭಾಗ್ಯವೆಂದರೆ ಈ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕದ ಟಿವಿ ಸೌಲಭ್ಯವಿದೆ. ಆದರೆ ಸುಮಾರು 200 ಮನೆಗಳಿರುವ ಇಲ್ಲಿ ಒಂದೇ ಒಂದು ಶೌಚಾಲಯ ಸಂಪರ್ಕವಿಲ್ಲ. ಇಲ್ಲಿ ಯಾದಗಿರಿ, ರಾಯಚೂರು ಮತ್ತು ಉತ್ತರ ಕರ್ನಾಟಕದ ಇತರ ಜಿಲ್ಲೆಗಳಿಂದ ಬಂದ ವಲಸೆ ನೌಕರರು ಇಲ್ಲಿ ವಾಸಿಸುತ್ತಾರೆ. ಹತ್ತಿರದ ಚರಂಡಿಯನ್ನೇ ತಮ್ಮ ಶೌಚಾಲಯವಾಗಿ ಬಳಸುತ್ತಾರೆ.
ಮಹಿಳೆಯರು ಶೌಚಾಲಯಕ್ಕೆ ಕಸದ ರಾಶಿಯ ಹಿಂದೆ ಕುಳಿತರೆ ಪುರುಷರು ತಮ್ಮ ಗುಡಿಸಲಿನಿಂದ ಸ್ವಲ್ಪ ದೂರದಲ್ಲಿ ಹೋಗಿ ಬಹಿರ್ದೆಸೆ ಮಾಡುತ್ತಾರೆ. ನಾವು ಇಲ್ಲಿಗೆ ಬಂದಲ್ಲಿಂದ ನಮ್ಮ ಪರಿಸ್ಥಿತಿ ಹೀಗೆಯೇ ಇದೆ ಎನ್ನುತ್ತಾರೆ ಕಾವ್ಯ ಎಂಬ ಯುವತಿ. ಈ ಪ್ರದೇಶದಲ್ಲಿ ನಿನ್ನೆ ನರಸಮ್ಮ ಎಂಬ 18 ವರ್ಷದ ಯುವತಿ ಬಹಿರ್ದೆಸೆಗೆಂದು ಚರಂಡಿ ಪಕ್ಕ ಹೋಗಿದ್ದಾಗ ಪ್ರವಾಹ ರಭಸಕ್ಕೆ ಕೊಚ್ಚಿ ಹೋಗಿದ್ದಳು.
ಮೊನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಚರಂಡಿ ನೀರು ಭರ್ತಿಯಾಗಿತ್ತು. ನರಸಮ್ಮ ದೇವಮ್ಮ ಎಂಬ ಮಹಿಳೆಯೊಂದಿಗೆ ಬಹಿರ್ದೆಸೆಗೆಂದು ಹೋಗಿದ್ದಳು. ಅಲ್ಲಿ ಕುಳಿತಿದ್ದಾಗ ಆಚಾನಕ್ಕಾಗಿ ಚರಂಡಿಗೆ ಬಿದ್ದು ಕೊಚ್ಚಿ ಹೋಗಿದ್ದಾಳೆ.
ದೇವಮ್ಮ ಕೂಡಲೇ ನರಸಮ್ಮನ ಸಂಬಂಧಿಕರಿಗೆ ವಿಷಯ ಮುಟ್ಟಿಸಿದರು. ನರಸಮ್ಮನಿಗಾಗಿ ಹುಡುಕಾಟ ನಡೆಸಿದರು. ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ನರಸಮ್ಮ ಶವ ಕೆಲಗಿಯಂಕೆರೆ ಕೆರೆ ಸಮೀಪ ಸಿಕ್ಕಿದೆ. ಹನುಮಂತ ಎನ್ನುವವರು ತುಂಬಿದ್ದ ನೀರಿನಲ್ಲಿಯೇ ನರಸಮ್ಮನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಏಳು ಜನರಿರುವ ಕುಟುಂಬಕ್ಕೆ ನರಸಮ್ಮ ಮತ್ತು ಆಕೆಯ ತಾಯಿ ಕಾಶಿಬಾಯಿ ಆಧಾರವಾಗಿದ್ದರು. ಯಾದಗಿರಿಯಿಂದ ಬೆಂಗಳೂರಿಗೆ ಜೀವನೋಪಾಯಕ್ಕಾಗಿ ಬಂದಿದ್ದ ನರಸಮ್ಮನ ತಂದೆ ವೆಂಕಪ್ಪ ಕಾಲು ಮುರಿದ ನಂತರ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು.
ನರಸಮ್ಮನಿಗೆ ಮುಂದಿನ ತಿಂಗಳು ಮದುವೆ ನಿಶ್ಚಯವಾಗಿತ್ತು ಎಂದು ಕಣ್ಣೀರು ಹಾಕುವ ವೆಂಕಪ್ಪ ಮತ್ತು ಕಾಶಿಬಾಯಿ ದಂಪತಿಗೆ ಇನ್ನು ನಾಲ್ವರು ಮಕ್ಕಳಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಶಾಸಕ ರಘು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಘು ಅವರ ಬೆಂಬಲಗಿರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದರು. ಬೈಯಪ್ಪನಹಳ್ಳಿ ಪೊಲೀಸರು ದೂರು ದಾಖಲಿಸಿದ್ದಾರೆ. ಮೇಯರ್ ಆರ್. ಸಂಪತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಮೃತ ನರಸಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos