ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ವಿಲೀನಗೊಳಿಸಿ, ಅವರ ಬದುಕಿನ ಗುಣಪಟ್ಟವನ್ನು ಸುಧಾರಿಸುವ ಮಹತ್ವದ 'ಕರ್ನಾಟಕದ ಅಲ್ಪಸಂಖ್ಯಾತರ ನೀತಿ'ಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಒಪ್ಪಿಗೆ ನೀಡಿರುವ 'ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ನೀತಿ' ಶಿಕ್ಷಣ, ಆರೋಗ್ಯ, ಆಶ್ರಯ, ಉದ್ಯೋಗಕ್ಕಾಗಿ ತರಬೇತಿ ಮತ್ತು ಉತ್ತೇಜನ ನೀಡುವ ಮಹತ್ವದ ಯೋಜನೆಗಳ ಮೂಲಕ ಲೈಂಗಿಕ ಅಲ್ಪಸಂಖ್ಯಾತರಿಗೆ ನೆರವು ನೀಡುವ ಪ್ರಸ್ತಾವಗಳನ್ನು ಒಳಗೊಂಡಿದೆ.
ಶಾಲಾ-ಕಾಲೇಜುಗಳ ಪಠ್ಯದಿಂದ ಹಿಡಿದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಲವಾರು ಯೋಜನೆಗಳಲ್ಲಿ ಲಿಂಗ ಗುರ್ತಿಸುವ ವೇಳೆ ಲೈಂಗಿಕ ಅಲ್ಪಸಂಖ್ಯಾತರಿಗೆ ಸರಿಸಮನಾದ ಅವಕಾಶ ನೀಡಬೇಕು. ಅದಕ್ಕಾಗಿ ಎಲ್ಲಾ ಬಗೆಯ ನಮೂನೆ ಹಾಗೂ ಅರ್ಜಿಗಳಲ್ಲಿ ಲಿಂಗ ಆಯ್ಕೆಯಲ್ಲಿ ಗಂಡು, ಹೆಣ್ಣು, ಲಿಂಗತ್ವ ಅಲ್ಪ ಸಂಖ್ಯಾತರೆಂದು ಕಡ್ಡಾಯಗೊಳಿಸುವುದನ್ನು ನೀತಿ ಒಳಗೊಂಡಿದೆ.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಬೆಯಲ್ಲಿ 'ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ನೀತಿ'ಗೆ ಒಪ್ಪಿಗೆ ನೀಡಲಾಯಿತು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಕಳೆದ 2016ರ ಏ.15ರಂದು ನೀಡಿರುವ ಆದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ನೀತಿ ರಚಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಹಲವಾರು ಇಲಾಖೆಗಳ ಪಾಲ್ಗೊಳ್ಳುವಿಕೆಗೆ ಒಳಪಟ್ಟು ಈ ನೀತಿಯನ್ನು ರೂಪಿಸಲಾಗಿದೆ. ಕೆಲ ಸಣ್ಣ-ಪುಟ್ಟ ತಿದ್ದುಪಡಿಗಳೊಂದಿಗೆ ಈ ನೀತಿ ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
93 ಸನ್ನಡತೆ ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ರಾಜ್ಯದ ಏಳು ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 7 ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 93 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಅಸ್ತು ನೀಡಿದೆ.
ಸನ್ನಡತೆಯ ಆಧಾರದ ಮೇಲೆ ಬೆಂಗಳೂರಿನ 41, ಮೈಸೂರು 16, ಬೆಳಗಾವಿ 13, ವಿಜಯಪುರ 7, ಬಳ್ಳಾರಿ 9, ಕಲಬುರ್ಗಿ 4 ಹಾಗೂ ಧಾರವಾಡದಲ್ಲಿ 3 ಕೈದಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬಿಡುಗಡೆಯಾಗುವ ಕೈದಿಗಳ ಪಟ್ಟಿ ಶೀಘ್ರದಲ್ಲಿಯೇ ರಾಜ್ಯಪಾಲಕ ಕೈ ಸೇರಲಿದ್ದು, ರಾಜ್ಯಪಾಲರ ಅನುಮತಿ ಬಳಿಕ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos