ಬೆಂಗಳೂರು: ಸೋರಿಕೆಯಾಗುತ್ತಿದ್ದ ಸಿಲಿಂಡರ್ ಸಿಡಿದು ಒಂದೇ ಕುಟುಂಬದ ನಾಲ್ವರು ಗಾಯಗೊಂಡ ಘಟನೆ ವೈಟ್ ಫೀಲ್ಡ್ ಸಮೀಪ ಕಾಡುಗೋಡಿಯಲ್ಲಿ ನಿನ್ನೆ ನಡೆದಿದೆ.
ನರೇಂದ್ರ ಶರ್ಮ ಅವರ ಪತ್ನಿ ಶಿಲ್ಪ ಅವರ 9 ತಿಂಗಳ ಮಗು ಆರ್ಯ ಮತ್ತು ನರೇಂದ್ರ ಅವರ ಸೋದರ ಹರೇಂದ್ರ ಗಾಯಗೊಂಡವರಾಗಿದ್ದಾರೆ. ಈ ದಂಪತಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಉತ್ತರ ಪ್ರದೇಶ ಮೂಲದವರಾದ ಇವರು ಕಾಡುಗೋಡಿ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ಘಟನೆ ನಿನ್ನೆ ಬೆಳಗ್ಗೆ ಸುಮಾರು 6.30ರ ಹೊತ್ತಿಗೆ ನಡೆದಿದೆ. ಹರೇಂದ್ರ ಎದ್ದು ಅಡುಗೆ ಮನೆಗೆ ಚಹಾ ಮಾಡಲೆಂದು ತೆರಳಿದರು. ಹಿಂದಿನ ದಿನ ರಾತ್ರಿ ಗ್ಯಾಸ್ ಸಿಲಿಂಡರ್ ನ್ನು ಆಫ್ ಮಾಡಿರಲಿಲ್ಲ. ಸೋರಿಕೆಯಾಗುತ್ತಿದ್ದ ಅನಿಲ ಅಡುಗೆ ಮನೆಯ ಸುತ್ತಲೂ ಆವರಿಸಿತ್ತು. ಹರೇಂದ್ರಗೆ ಗ್ಯಾಸ್ ವಾಸನೆ ಬರಲಿಲ್ಲ. ಸ್ಟೌವ್ ಆನ್ ಮಾಡಿದರು. ಆಗ ಸಿಡಿಯಿತು. ಕೋಣೆಯಲ್ಲಿ ಮಗುವಿನ ಜೊತೆ ಮಲಗಿದ್ದ ದಂಪತಿ ಕೂಡ ಗಾಯಗೊಂಡಿದ್ದಾರೆ. ಪಕ್ಕದ ಮನೆಗೆ ಕೂಡ ಹಾನಿಯಾಗಿದೆ.
ಸ್ಫೋಟದ ಸದ್ದು ಕೇಳಿದ ಪಕ್ಕದ ಮನೆಯವರು ಕೂಡಲೇ ಮನೆಗೆ ಧಾವಿಸಿ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಇವರ ಸಂಬಂಧಿಕರು ಉತ್ತರ ಪ್ರದೇಶದಿಂದ ನಗರಕ್ಕೆ ಆಗಮಿಸಬೇಕಷ್ಟೆ. ನಿರ್ಲಕ್ಷ್ಯದಿಂದ ಈ ಘಟನೆಯಾಗಿದೆ ಎಂದು ಕಾಡುಗೋಡಿ ಪೊಲೀಸರು ಹೇಳುತ್ತಾರೆ.
ನಾನು ಬೆಳಗ್ಗೆ ವಾಕಿಂಗ್ ಹೋಗುವುದರಲ್ಲಿದ್ದೆ. ಆಗ ಶಬ್ದ ಕೇಳಿಸಿತು. ಮನೆಗೆ ಹೋಗಿ ಏನಾಗಿದೆ ಎಂದು ನೋಡಿದಾಗ ಹರೇಂದ್ರ ಕಿರುಚಾಡುತ್ತಿದ್ದರು. ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಾಯ ಮಾಡಿದರು. ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos