ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ಅಧಿಕಾರಿಗಳು ತಾಯಿ ಇಂದಿರಾ, ಸಹೋದರಿ ಕವಿತಾ ಮತ್ತು ಸಹೋದರ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪತ್ರಿಕೆ ಒಡೆತನದ ವಿಷಯಕ್ಕೆ ಇಂದ್ರಜಿತ್ ಹಾಗೂ ಗೌರಿ ಲಂಕೇಶ್ ನಡುವೆ ಜಗಳವಾಗಿತ್ತು.ನಂತರ ಗೌರಿ ಲಂಕೇಶ್ ಗೆ 2005 ರಲ್ಲಿ ಪಿಸ್ತೂಲ್ ತೋರಿಸಿ ಇಂದ್ರಜಿತ್ ಬೆದರಿಕೆ ಹಾಕಿದ್ದರ ಸಂಬಂಧ ಅಧಿಕಾರಿಗಳು ಮಾಹಿತಿ ಪಡೆಯು ಮುಂದಾಗಿದ್ದಾರೆ. ನಡೆದು ಹೋದ ಘಟನೆ ಬಗ್ಗೆ ಮತ್ತೆ ನೆನಪಿಸಿದ್ದಕ್ಕೆ ಇಂದ್ರಜಿತ್ ಅಧಿಕಾರಿಗಳ ವಿರುದ್ಧ ಕೂಗಾಡಿದ್ದಾರೆ. ಆದರೆ ತನಿಖಾಧಿಕಾರಿಗಳು ತಮ್ಮ ವಿಚಾರಣೆ ನಡೆಸಿದ ನಂತರ, ಇದು ತಮ್ಮ ಕರ್ತವ್ಯದ ಒಂದು ಭಾಗ. ತನಿಖೆಗಾಗಿ ವಿವರ ಕೇಳಬೇಕಾಯಿತು ಎಂದು ವಿವರಣೆ ನೀಡಿದ್ದಾರೆ.
ಲೈಸೆನ್ಸ್ ಇರುವ ಗನ್ ಅನ್ನು ಹಾಜರು ಪಡಿಸುವಂತೆ ಅಧಿಕಾರಿಗಳು ಇಂದ್ರಜಿತ್ ಗೆ ಕೇಳಿದ್ದಾರೆ. ಅದನ್ನು ಬಹಳ ಹಿಂದೆಯೇ ಮಾರಾಟ ಮಾಡಿದ್ದಾಗಿ ಅಧಿಕಾರಿಗಳಿಗೆ ಇಂದ್ರಜಿತ್ ತಿಳಿಸಿದ್ದಾರೆ. ಮಾರಾಟ ಮಾಡಿರುವ ದಾಖಲಾತಿಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನೂ ಗೌರಿ ಲಂಕೇಶ್ ಹತ್ಯೆ ಸಂಬಂಧ ಎಸ್ ಐಟಿ ಅಧಿಕಾರಿಗಳು ನಗರದ ಹೊಲವಲಯದ ರಿಯಲ್ ಎಸ್ಟೇಟ್ ಏಜೆಂಟ್ ಅರುಣ್ ಎಂಬಾತನನ್ನು ವಿಚಾರಣೆಗೊಳಪಡಿಸಿದ್ದಾರೆ. ನೆಲಮಂಗಲದ ಹೊರವಲಯದಲ್ಲಿರುವ ಆಸ್ತಿ ವಿವಾದ ಸಂಬಂಧ ಅರುಣ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸತತ ಐದು ಗಂಟೆ ವಿಚಾರಣೆ ನಂತರ ಹತ್ಯೆ ಪ್ರಕರಣಕ್ಕೂ ಅರುಣ್ ಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿರುವ ಇಂದ್ರಜಿತ್, ಕೆಲ ವಿಷಯಗಳಲ್ಲಿ ನನ್ನ ಮತ್ತು ಗೌರಿ ನಡುವೆ ಭಿನ್ನಾಭಿಪ್ರಾಯಗಳಿತ್ತು. ಎಲ್ಲಾ ಕುಟುಂಬಗಳಲ್ಲಿರುವಂತೆ ನಮ್ಮಲ್ಲೂ ಜಗಳವಿತ್ತು, ನಂತರ ಸರಿಯಾಯಿತು. ಕೌಟುಂಬಿಕ ಸಮಾರಂಭಗಳಲ್ಲಿ ನಾವಿಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದೆವು, ನನ್ನ ಸಹೋದರಿ ಜೊತೆ ನನಗೆ ವಿಶೇಷ ಸಂಬಂಧವಿತ್ತು. ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ, ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಇಂದ್ರಜಿತ್ ಹೇಳಿದ್ದಾರೆ.