ಬೆಂಗಳೂರು: ಸೂಟ್ ಕೇಸ್ ತುಂಬಾ ದುಡ್ಡು ತೆಗೆದುಕೊಂಡು ಹೋದರೆ ಮಾತ್ರ ವಿಧಾನ ಸೌಧದಲ್ಲಿ ಕೆಲಸ ಆಗುತ್ತದೆ ಎಂಬುದಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಮಲ್ಲಿಕಾ ಎಸ್. ಘಂಟಿ ನೀಡಿರುವ ಹೇಳಿಕೆ ಉನ್ನತ ಶಿಕ್ಷಣ ಸಚಿವ ಬಸವರಾಯ ರೆಡ್ಡಿ ಅವರಿಗೆ ಇರಿಸು ಮುರಿಸು ಉಂಟು ಮಾಡಿದ್ದು, ಈ ಸಂಬಂಘ ಘಂಟಿ ಅವರಿಂದ ವಿವರಣೆ ಕೋರಲು ನಿರ್ಧರಿಸಿದ್ದಾರೆ.
ಹಂಪಿ ವಿಶ್ವ ವಿದ್ಯಾನಿಲಯದಲ್ಲಿ ಖಾಲಿಯಿದ್ದ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ ಬೆನ್ನಲ್ಲೇ ಮಲ್ಲಿಕಾ ಘಂಟಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಲ್ಲಿಕಾ ಘಂಟಿ ನೀಡಿದ್ದಾರೆನ್ನಲಾದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಯರಡ್ಡಿ, ಏಕೆ ಅವರು ಹೀಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಕುಲಪತಿ ಸ್ಥಾನದಲ್ಲಿದ್ದವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ, ಅವರ ಹೇಳಿಕೆ ಸಂಬಂಧ ವಿವರ ಕೇಳುವುದಾಗಿ ಹೇಳಿದ್ದಾರೆ.
ಇನ್ನೂ ಮಲ್ಲಿಕಾ ಘಂಟಿ ಅವರ ಹೇಳಿಕೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅವರ ಆರೋಪವನ್ನು ನಾನು ಅಲ್ಲಗಳೆಯಲ್ಲ. ವಿಧಾನಸೌಧವೇನು ಗಂಗೋತ್ರಿ ಅಲ್ಲ. ವಿಧಾನಸೌಧದಲ್ಲಿಯೂ ಭ್ರಷ್ಟಾಚಾರವಿದೆ. ಮಲ್ಲಿಕಾ ಘಂಟಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರ ಹೇಳಿಕೆಯನ್ನು ಕಡೆಗಣಿಸಲು ಆಗಲ್ಲ. ಆರೋಪದ ಬಗ್ಗೆ ದಾಖಲೆಗಳಿದ್ದರೆ ಒದಗಿಸಲಿ ಎಂದು ಆಗ್ರಹಿಸಿದರು.
ಘಂಟಿ ಅವರ ಹೇಳಿಕೆ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿದೆ. ಆದರೆ ತಮ್ಮದು ಸ್ವಚ್ಛ ಸರ್ಕಾರ ಎಂದು ಹೇಳುವ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos