ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿರುವ ಪ್ರಾಥಮಿಕ ತನಿಖಾ ವರದಿ ಕತ್ತಲೆ ಕೋಣೆಯಲ್ಲಿ ಕುರುಡು ಕಪ್ಪು ಬೆಕ್ಕು ಹುಡುಕಾಡುವಂತಿದೆ ಎಂದು ಬಿಎಸ್ ವೈ ವಕೀಲ ಸಿವಿ ನಾಗೇಶ್ ಹೇಳಿದ್ದಾರೆ.
ತಮ್ಮ ವಿರುದ್ಧ ದಾಖಲಿಸಿರುವ ಎಫ್ ಐ ಆರ್ ರದ್ದುಗೊಳಿಸಬೇಕೆಂದು ಕೋರಿ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಯಾವುದೇ ದೂರು ದಾಖಲಿಸಬೇಕಾದರೇ, ಅದನ್ನು ಪುಷ್ಟೀಕರಿಸುವ ಸಾಕ್ಷ್ಯ ಬೇಕಾಗುತ್ತದೆ.ಎಲ್ಲಿ ಹೇಗೆ ಯಾವಾಗ ಅಪರಾಧ ನಡೆಯಿತು ಎಂಬ ಬಗ್ಗೆ ಅಗತ್ಯ ಪುರಾವೆಗಳನ್ನು ಒದಗಿಸಬೇಕು,ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಸಾಕ್ಷಿ ಒದಗಿಸಿಲ್ಲ. ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಡಿನೋಟಿಫಿಕೇಷನ್ ಮಾಡುವಂತೆ ಯಡಿಯೂರಪ್ಪ ಅವರು ಮಾಡಿದ್ದ ಶಿಫಾರಸ್ಸನ್ನು ಪರಿಗಣಿಸಿಲ್ಲ, ಹೀಗಾಗಿ ಇದರಲ್ಲಿ ಯಾವುದೇ ಲಾಭ ಮತ್ತು ನಷ್ಟದ ಮಾತಿಲ್ಲ, ಎಫ್ ಐ ಆರ್ ದಾಖಲಿಸುವ ಅಗತ್ಯವೂ ಇಲ್ಲ ಎಂದು ವಾದಿಸಿದ್ದಾರೆ.
ಇದೇ ವೇಳೆ ಶಾಸಕ ಭೈರತಿ ಬಸವರಾಜ್ ಅವರಿಗೆ ಸೇರಿದ 18 ಎಕರೆ ಭೂಮಿಯನ್ನು ಸರ್ಕಾರ ಡಿನೋಟಿಫೈ ಮಾಡಿರುವ ದಾಖಲೆಗಳನ್ನು ಅವರು ಕೋರ್ಟ್ ಗೆ ಸಲ್ಲಿಸಿದರು.
2014 ರ ಫೆಬ್ರವರಿ 13ರ ವೇಳೆಗೆ ರಾಜ್ಯಸರ್ಕಾರವೇ 1300 ಎಕರೆ ಜಮೀನು ಶಿವರಾಮ ಕಾರಂತ ಬಡವಾಣೆಯಲ್ಲಿ ಡಿನೋಟಿಫಿಕೇಶನ್ ಮಾಡಿದೆ ಎಂದು ಗಮನಸೆಳೆದಿದೆ.ಅದಕ್ಕೆ ಪೂರಕವಾಗಿ ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಸಿರುವುದು ವಿಚಾರಣೆ ಕುತೂಹಲ ಕೆರಳುವಂತೆ ಮಾಡಿದೆ. ಈ ಅಕ್ರಮವನ್ನು ಎಸಿಬಿ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಯಡಿಯೂರಪ್ಪ ಅವರ ವಿರುದ್ಧ ಎಸಿಬಿ ತಪ್ಪು ದಾಖಲೆ ಸಲ್ಲಿಸಿದೆ ಎಂದು ನಾಗೇಶ್ ವಿವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos