ಮೈಸೂರು: ಕಾವೇರಿ ನಿರ್ವಹಣೆ ಮಂಡಳಿಯ ರಚನೆಗೆ ಸುಪ್ರೀಂ ಕೋರ್ಟ್ ನಿನ್ನೆಯ ವಿಚಾರಣೆ ವೇಳೆ ಒಲವು ತೋರಿಸಿರುವುದು ಮತ್ತು ಕಾವೇರಿ ನದಿ ನೀರಿನ ನಾಲ್ಕು ಸಂಬಂಧಿತ ರಾಜ್ಯಗಳು ಸುಪ್ರೀಂ ಕೋರ್ಟ್ ಗೆ ಲಿಖಿತ ಉತ್ತರ ನೀಡುವಂತೆ ಹೇಳಿರುವುದು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜನರಲ್ಲಿ ಆಘಾತವನ್ನುಂಟುಮಾಡಿದೆ.
ಸತತ ಮೂರು ವರ್ಷಗಳ ಬರಗಾಲ ನಂತರ ಈ ವರ್ಷ ಮಳೆಯಾಗಿರುವುದು ಈ ಜಿಲ್ಲೆಗಳ ಜನರಲ್ಲಿ ದಸರಾ ಆಚರಣೆಗೆ ಸ್ವಲ್ಪ ಹರ್ಷವನ್ನುಂಟುಮಾಡಿದರೂ ಕೂಡ ಕರ್ನಾಟಕ, ತಮಿಳು ನಾಡು, ಕೇರಳ ಮತ್ತು ಪುದುಚೆರಿ ರಾಜ್ಯ ಸರ್ಕಾರಗಳಿಗೆ ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಲಿಖಿತ ಅಫಿಡವಿಟ್ಟನ್ನು ಅಕ್ಟೋಬರ್ 24ರೊಳಗೆ ಸಲ್ಲಿಸುವಂತೆ ಹೇಳಿರುವುದು ಆತಂಕ ಮತ್ತು ಆಘಾತವನ್ನುಂಟುಮಾಡಿದೆ.
ರೈತ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರೂ ಕೂಡ ಚುನಾವಣೆ ಹೊಸ್ತಿನಲ್ಲಿರುವ ಈ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ ಎನ್ನಬಹುದು. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೆ ಸುಪ್ರೀಂ ಕೋರ್ಟ್ ನ ತೀರ್ಪು ಒಳ್ಳೆಯದಾಗಬಹುದು ಇಲ್ಲವೇ ಕೆಟ್ಟದಾಗಬಹುದು. ಇಲ್ಲಿನ ಗ್ರಾಮೀಣ ಜನರು ಕಾವೇರಿ ನೀರನ್ನು ಹೆಚ್ಚಾಗಿ ಆಶ್ರಯಿಸಿಕೊಂಡಿದ್ದಾರೆ.
ನಿಗದಿತ ನೀರು ಹಂಚಿಕೆಯಾಗದ್ದರಿಂದ ಕರ್ನಾಟಕ ಖಾರಿಫ್ ಬೆಳೆಗೆ ಸುಮಾರು 150 ಟಿಎಂಸಿ ನೀರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕಾವೇರಿ ನಿರ್ವಹಣಾ ಮಂಡಳಿ ನೀರು ಬಿಡುಗಡೆ ಕುರಿತು ನಿರ್ಧರಿಸುವುದರಿಂದ ತಮಿಳುನಾಡಿಗೆ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುವ ಸಾಧ್ಯತೆಯಿದೆ. ಉಳಿಕೆ ನೀರನ್ನು ಬಳಸಲು ತಮಿಳು ನಾಡಿಗೆ ಅವಕಾಶವಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ನಿಜಕ್ಕೂ ಈ ಭಾಗದ ರೈತರಲ್ಲಿ ಆತಂಕ ಸೃಷ್ಟಿಸಿದೆ. ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ಅನ್ಯಾಯವಾದರೆ ಜನ ತೊಂದರೆಗೀಡಾಗಿ ಆತಂಕಕ್ಕೀಡಾಗುವುದು ಖಂಡಿತ ಎಂದು ಕಾವೇರಿ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇ ಗೌಡ ತಿಳಿಸಿದ್ದಾರೆ.
ಈ ಮಧ್ಯೆ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ಮುಂದಿನ ಸೋಮವಾರ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ರಾಜ್ಯದ ಕಾನೂನು ತಂಡದ ಮುಖ್ಯಸ್ಥ ಫಾಲಿ ಎಸ್.ನಾರಿಮನ್, ತಾಂತ್ರಿಕ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತುಕತೆ ನಡೆಸಲಿದ್ದಾರೆ.
ಕಾವೇರಿ ನೀರು ವಿವಾದ ನ್ಯಾಯಮಂಡಳಿ 2007ರಲ್ಲಿ ನೀಡಿದ ಅಂತಿಮ ತೀರ್ಪಿಗೆ ಸಂಬಂಧಪಟ್ಟಂತೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ ಸುಪ್ರೀಂ ಕೋರ್ಟ್ ನ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಭೆ ಕರೆಯಲಾಗಿದೆ. ನಿರ್ವಹಣಾ ಮಂಡಳಿ ರಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ.