ಮಂಗಳೂರು: ಮಂದ್ಯದಂಗಡಿ ತೆರವು ಮಾಡುವಂತೆ ಆಗ್ರಹಿಸಿ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಅಧಿಕಾರಿಗಳು ಮಣಿದಿದ್ದು, ಮದ್ಯದಂಗಡಿಯನ್ನು ಬಂದ್ ಮಾಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಪೇಟೆಯಲ್ಲಿರುವ ಮದ್ಯದಂಗಡಿಯನ್ನು ಕೂಡಲೇ ಮುಚ್ಚುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೆ.11 ರಿಂದಲೂ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಇದರಂತೆ ನಿನ್ನೆ ಕೂಡ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ವಿರೋಧದ ನಡುವೆಯೂ ಮದ್ಯದಂಗಡಿಯನ್ನು ತೆಗೆಯಲಾಗಿತ್ತು. ಈ ವೇಳೆ ಮದ್ಯವನ್ನು ಖರೀದಿ ಮಾಡಲು ಬಂದಿದ್ದ ಜನರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಮದ್ಯ ಖರೀದಿದಾರರು ಸ್ಥಳದಿಂದ ಕಾಲ್ಕಿತ್ತುವಂತೆ ಮಾಡಿದ್ದರು.
ಪ್ರತಿಭಟನೆ ಬಳಿಕವೂ ಪರವಾನಿಗಿಯನ್ನು ರದ್ದುಗೊಳಿಸದೇ ಇದ್ದ ಅಬಕಾರಿ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಸೆಪ್ಟೆಂಬರ್.20ರಂದು ಗ್ರಾಮಕ್ಕೆ ಸಚಿವ ರಾಮಲಿಂಗಾ ರೆಡ್ಡಿಯವರು ಭೇಟಿ ನೀಡಿದ್ದ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಗೌಡ, ಪುತ್ತೂರು ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ ಮತ್ತು ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿಪಿ ವರ್ಗೆಶ್ ಅವರು ಮನವಿ ಪತ್ರವೊಂದನ್ನು ನೀಡಿದ್ದರು. ಪತ್ರದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮದ್ಯದಂಗಡಿ ನಡೆಸಲಾಗುತ್ತಿದ್ದು, ಕೂಡಲೇ ಮದ್ಯದಂಗಡಿ ಮುಚ್ಚುವಂತೆ ಮನವಿ ಮಾಡಿಕೊಂಡಿದ್ದರು.
ಬಳಿ ಜಿಲ್ಲಾಧಿಕಾರಿ ಸ್ಥಳ ಕುರಿತಂತೆ ಸಮೀಕ್ಷೆ ನಡೆಸುವಂತೆ ಆದೇಶಿಸಿದ್ದರು. ಸಮೀಕ್ಷೆ ವೇಳೆ ಮದ್ಯದಂಗಡಿಯ ಕಟ್ಟಡ ಸರ್ಕಾರಿ ಜಾಗದಲ್ಲಿರುವುದು ಸಾಬೀತಾಗಿತ್ತು. ಬಳಿಕ ವರದಿ ಪಡೆದ ಜಿಲ್ಲಾಧಿಕಾರಿಗಳು ಕೂಡಲೇ ಮದ್ಯದಂಗಡಿಯನ್ನು ಬಂದ್ ಮಾಡುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಸೂಚನೆಯಂತೆಯೇ ಸ್ಥಳಕ್ಕೆ ಬಂದ ಅಬಕಾರಿ ಇಲಾಖೆ ಅಧಿಕಾರಿ ಮುರಳೀಧರ್ ಅವರು ಶುಕ್ರವಾರ ಸಂಜೆ ಮದ್ಯದಂಗಡಿಗೆ ಬೀಗ ಜಡಿದಿದ್ದಾರೆ.