ವಿದ್ಯಾರ್ಥಿ ನೀರಿನಲ್ಲಿ ಮುಳುಗುತ್ತಿರುವುದು
ಬೆಂಗಳೂರು: ಬೆಂಗಳೂರಿನ ನಾಷನಲ್ ಕಾಲೇಜ್ ನ 17 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕನಕಪುರ ತಾಲೂಕಿನ ರಾವುಗೊಡ್ಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಜಯನಗರ ನ್ಯಾಷನಲ್ ಕಾಲೇಜಿನ ವಿಶ್ವಾಸ್ ಮೃತ ಪಟ್ಟ ವಿದ್ಯಾರ್ಥಿಯಾಗಿದ್ದು, ಕಾಲೇಜು ವತಿಯಿಂದ ರಾವುಗೊಡ್ಲು ಬೆಟ್ಟಕ್ಕೆ ಎನ್ಸಿಸಿ ಕ್ಯಾಂಪ್ಗೆ 25 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿತ್ತು. ಸಂದರ್ಭದಲ್ಲಿ ಗುಂಡಾಂಜನೇಯ ದೇವಾಲಯದ ಕಲ್ಯಾಣಿಗೆ ಇಳಿದಿದ್ದ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕಿಸಿಕೊಳ್ಳುವಾಗಲೇ ಅತ್ತ ವಿಶ್ವಾಸ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ನಡೆದಿದೆ.
ಆಡಳಿತ ಮಂಡಳಿಯ ಬೇವಾಬ್ದಾರಿಯಿಂದ ಈ ದುರ್ಘಟನೆ ನಡೆದಿದ್ದು, ನ್ಯಾಯ ಒದಗಿಸುವಂತೆ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜಿಗೆ ಬಂದ ಮೇಲೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಕಾಲೇಜಿಗೆ ಸಂಬಂಧಿಸಿದ್ದು, ವಿದ್ಯಾರ್ಥಿಗಳ ಕಡೆ ಗಮನ ಹರಿಸದಿದ್ದರಿಂದ ವಿಶ್ವಾಸ್ ಸಾವನ್ನಪ್ಪಿದ್ದಾನೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿಯೇ ಹೊಣೆ ಎಂದು ಪೋಷಕರು ದೂರಿದ್ದಾರೆ.
ಜೊತೆಯಲ್ಲಿದ್ದ ಸ್ನೇಹಿತರು ವಿಶ್ವಾಸ್ ನೀರಿನಲ್ಲಿ ಮುಳುಗಿತ್ತಿರುವುದನ್ನು ಗಮನಿಸದೆ ಸೆಲ್ಫಿಯಲ್ಲಿ ತಲ್ಲೀನರಾಗಿದ್ದು ಕೂಡ ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಎಲ್ಲರೂ ಒಟ್ಟಿಗೆ 10 ಅಡಿ ಆಳದ ಕಲ್ಯಾಣಿಗೆ ಈಜಾಡಲು ಇಳಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭ ವಿಶ್ವಾಸ್ ನೀರಿನಲ್ಲಿ ಮುಳುಗಿದ್ದು, ಸ್ನೇಹಿತರ ಗಮನಕ್ಕೆ ಬಾರಲೇ ಇಲ್ಲ.