ಬೆಂಗಳೂರು: ಘೋಷಿಸಿಕೊಂಡಿರುವ ಆದಾಯಕ್ಕಿಂತಲೂ ಹೆಚ್ಚುವರಿಯಾಗಿ ರೂ.650 ಕೋಟಿ ಆದಾಯ ಪತ್ತೆಯಾಗಿರುವ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಹಾಗೂ ಕಾಫಿ ಡೇ ಕಂಪನಿಯ ಮಾಲೀಕರಾದ ವಿ.ಜೆ ಸಿದ್ಧಾರ್ಥ್ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸೆ.21 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಿದ್ಧಾರ್ಥ್ ಅವರ ವಿವಿಧ ಕಚೇರಿಗಳು ಹಾಗೂ ನಿವಾಸಗಳ ಮೇಲೆ ಮೂರು ದಿನಗಳ ಕಾಲ ದಾಳಿ ನಡೆಸಿತ್ತು. ಈ ವೇಳೆ ಸಿದ್ಧಾರ್ಥ್ ಅವರು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚುವರಿಯಾಗಿ ರೂ.650 ಕೋಟಿ ಆಸ್ತಿ ಪತ್ತೆಯಾಗಿತ್ತು.
ಅಘೋಷಿತ ಆಸ್ತಿ ಪತ್ತೆಯಾಗಿರುವ ಹಿನ್ನಲೆಯಲ್ಲಿ 2 ದಿನಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ಸಿದ್ಧಾರ್ಥ್ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ತೆರಿಗೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿದ್ಧಾರ್ಥ್ ಅವರು ಮತ್ತಷ್ಟು ಆದಾಯ ದಾಖಲೆಗಳನ್ನು ಬಚ್ಚಿಟ್ಟಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ದಾಳಿ ವೇಳೆ ವಶಕ್ಕೆ ಪಡೆಯಲಾಗಿರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ದಾಳಿ ಬಳಿಕ ಭಾನುವಾರ ಹೇಳಿಕೆಯನ್ನು ಬಿಡುಗೆಡ ಮಾಡಿದ್ದ ಆದಾಯ ತೆರಿಗೆ ಇಲಾಖೆ, ಸಿದ್ಧಾರ್ಥ್ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ನಡೆಸಲಾದ ದಾಳಿಯಲ್ಲಿ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿದ್ಧಾರ್ಥ್ ಅವರು ಐಟಿ ಕಾನೂನು ಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಿತ್ತು.