ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ತವರಿಗೆ ಆಗಮಿಸಿದ ಕರಾವಳಿ ವೀರ ಯೋಧನಿಗೆ ಅದ್ಧೂರಿ ಸ್ವಾಗತ
ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಕರಣ್ ನಗರದ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಇ-ತೊಯ್ಬಾ ಉಗ್ರರನ್ನು ಸದೆಬಡಿದಿದ್ದ ಸಿಆರ್'ಪಿಎಫ್ ಯೋಧ ಝಬೆರ್ ಅವರು ತವರಿಗೆ ಆಗಮಿಸಿದ್ದು, ಹುಟ್ಟೂರಿನಲ್ಲಿ ಝಬೈರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ.
ಶನಿವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಝುಬೆರ್ ಅವರು ನಿನ್ನೆ ಬೆಳಿಗ್ಗೆ ಹುಟ್ಟೂರು ಉಪ್ಪಿನಂಗಡಿ ಸಮೀಪದ ನೇರಂಕಿಗೆ ಬಂದಿದ್ದರು. ಝಬೆರ್ ಅವರು ಆಗಮಿಸುತ್ತಿದ್ದಂತೆಯೇ ಸ್ಥಳದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿ ನೆರೆದಿದ್ದ ಜನರು ಝಬೈರ್ ಪರ ಘೋಷಣೆಗಳನ್ನು ಕೂಗಿದರು.
ನಂತರ ತೆರೆದ ವಾಹನದಲ್ಲಿ ಯೋಧ ಝಬೆರ್ ಅವರನ್ನು ಮೆರವಣಿಗೆ ಮಾಡಿ ಸನ್ಮಾನ ಮಾಡಲಾಯಿತು. ಕೊಯಿಲ, ಆತೂರು, ಗೋಳಿತ್ತಡಿ, ರಾಮಕುಂಬ ಮಾರ್ಗವಾಗಿ ನೇರಂಕಿಯವರೆಗೂ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಲಾಯಿತು.
ಫೆ.12 ರಂದು ಸಿಆರ್'ಪಿಎಫ್ 23 ಬೆಟಾಲಿಯನ್ ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಸಿಆರ್'ಪಿಎಫ್ ಪಡೆಯಲ್ಲಿ ಝುಬೆರ್ ಅವರೂ ಕೂಡ ಇದ್ದರು. ಯೋಧರ ಮೇಲೆ ದಾಳಿ ನಡೆಸಿದ್ದ ಉಗ್ರರು, ನಂತರ ಕರಣ್ ನಗರ ಪ್ರದೇಶದಲ್ಲಿದ್ದ ಕಟ್ಟಡವೊಂದರಲ್ಲಿ ಅವಿತುಕುಳಿತಿದ್ದರು. ನಂತರ ಕಾರ್ಯಾಚರಣೆಗಿಳಿದಿದ್ದ ಯೋಧರು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಅಡಗಿ ಕುಳಿತಿದ್ದ ಎಲ್ಲಾ ಉಗ್ರರನ್ನು ಹತ್ಯೆ ಮಾಡಿದ್ದರು. ಕಾರ್ಯಾಚರಣೆ ವೇಳೆ ಓರ್ವ ಸಿಆರ್'ಪಿಎಫ್ ಯೋಧ ಮೊಜಾಹಿದ್ ಖಾನ್ ಎಂಬುವವರು ಹುತಾತ್ಮರಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos