ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ವಿಫ್ಟ್ ಕಾರಿನ ಹಿಟ್ ಅಂಡ್ ರನ್ ಪ್ರಕರಣದಲ್ಲಿ ರಾಜ್ಯದ ಪ್ರತಿಭಾನ್ವಿತ ಫುಟ್ ಬಾಲ್ ಆಟಗಾರ್ತಿಯೊಬ್ಬರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಬನಶಂಕರಿ ಬಳಿ ಇರುವ ಪಿಇಎಸ್ ಕಾಲೇಜು ಫ್ಲೈಓವರ್ ಸಮೀಪ ರಸ್ತೆ ಭಾನುವಾರ ನಡೆದ ಅಪಘಾತದಲ್ಲಿ ರಾಜ್ಯಮಟ್ಟದ ಫುಟ್ ಬಾಲ್ ಆಟಗಾರ್ತಿ ತೇಜಸ್ವಿನಿ ಗೌಡ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು 2.30ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ಸ್ನೇಹಿತರೊಂದಿಗೆ ತೇಜಸ್ವಿನಿ ಗೌಡ ಅವರು ಶಾಪಿಂಗ್ ಗೆ ತೆರಳಿ ವಾಪಸಾಗುತ್ತಿದ್ದರು. ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಬಳಿ ಇಳಿದುಕೊಂಡ ತೇಜಸ್ವಿನಿ ಗೌಡ ತನ್ನ ಸಹೋದರ ಸಂಬಂಧಿ ಸಚಿನ್ ಗೌಡ ರೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಔಟರ್ ರಿಂಗ್ ರೋಡ್ ನ ಫ್ಲೈ ಓವರ್ ಬಳಿ ವೇಗವಾಗಿ ಬಂದ ಕಾರು ಬೈಕ್ ಢಿಕ್ಕಿ ಹೊಡೆದಿದೆ. ಕೂಡಲೇ ಸಚಿನ್ ಗೌಡ ತಮ್ಮ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ನೆಲಕ್ಕುರುಳಿದ ತೇಜಸ್ವಿನಿ ಗೌಡ ಮೇಲೆ ಕಾರಿನ ಹಿಂಬದಿ ಚಕ್ರ ಹರಿದಿದೆ. ತೇಜಸ್ವಿನಿ ಗೌಡ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಹೀಗಾಗಿ ತೇಜಸ್ವಿನಿ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಅಪಘಾತದಲ್ಲಿ ಸಚಿನ್ ಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಸ್ವಿಫ್ಟ್ ಕಾರು ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಮೃತ ತೇಜಸ್ವಿನಿ ಗೌ ವೃತ್ತಿಪರ ಫುಟ್ ಬಾಲ್ ಆಟಗಾರ್ತಿಯಾಗಿದ್ದು. 2015ರಲ್ಲಿ ಅಸ್ಸಾಂನಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ತೇಜಸ್ವಿನಿ, 2013-14ರಿಂದ ಬೆಂಗಳೂರು ಜಿಲ್ಲಾ ಫುಟ್ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ರಾಷ್ಟ್ರೀಯ ಕೋಚ್ ಚಿತ್ರಾ ಗಂಗಾಧರ್ ಅವರ ಗರಡಿಯಲ್ಲಿ ಫುಟ್ಬಾಲ್ ವೃತ್ತಿ ಬದುಕು ಆರಂಭಿಸಿದ್ದ ತೇಜಸ್ವಿನಿ ಪ್ರತಿಭಾವಂತ ಆಟಗಾರ್ತಿಯಾಗಿದ್ದರು. ತೇಜಸ್ವಿನಿಗೌಡ ಅವರ ತಂದೆ ದೇವರಾಜ್ ಗೌಡ ವೃತ್ತಿಪರ ಟ್ರಕ್ ಚಾಲಕರಾಗಿದ್ದಾರೆ.
ತೇಜಸ್ವಿನಿ ಅವರ ಸಾವಿಗೆ ಸಾಯ್, ಕರ್ನಾಟಕ ಫುಟ್ಬಾಲ್ ಸಂಸ್ಥೆ ಮತ್ತು ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಂತಾಪ ವ್ಯಕ್ತಪಡಿಸಿವೆ.ಅಂತ್ಯಕ್ರಿಯೆಗಾಗಿ ತೇಜಸ್ವಿನಿ ಮೃತದೇಹವನ್ನು ತವರೂರಾದ ಹಾಸನಕ್ಕೆ ಸೋಮವಾರ ಕೊಂಡೊಯ್ಯಲಾಗಿದೆ. ''ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದ ತೇಜಸ್ವಿನಿ ಇತ್ತೀಚೆಗೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ನಿಜವಾಗಿಯೂ ದಿಗ್ಭ್ರಮೆ ಹಾಗೂ ಬೇಸರ ತಂದಿದೆ,'' ಎಂದು ತೇಜಸ್ವಿನಿ ಕೋಚ್ ಚಿತ್ರಾ ತಿಳಿಸಿದ್ದಾರೆ.