ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ ನೀಡಿ ಅವರ ಬೆಂಬಲ ಗಳಿಸುವ ಯತ್ನದಲ್ಲಿದ್ದಾಗಲೇ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 12 ನೆಯ ಶತಮಾನದ ಸಮಾಜ ಸುಧಾರಕ ಬಸವಣ್ಣನ ಜಯಂತಿಯಂದು ಬಸವೇಶ್ವರರಿಗೆ ಗೌರವ ಸಲ್ಲಿಸಿದ್ದಾರೆ.
ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಶಾ ಮಾಲಾರ್ಪಣೆ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಅನಂತ್ ಕುಮಾರ್ ಸಹ ಹಾಜರಿದ್ದು ಅವರು ಸಹ ಬಸವಣ್ಣನಿಗೆ ಗೌರವ ಸಮರ್ಪಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂಡು ಬಿಂಬಿತರಾಗಿರುವ ಯಡಿಯೂರಪ್ಪ ಸಹ ಲಿಂಗಾಯತ ಮುಖಂಡರೆನ್ನುವುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ಇದೇ ವೇಳೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ "ಹಿಂದೂ ಸಮಾಜವನ್ನು ವಿಭಜಿಸಿ ಮತ ಪಡೆದುಕೊಳ್ಳಲು ನೋಡುತ್ತಿರುವ ಕಾಂಗ್ರೆಸ್ ತಂತ್ರ ಫಲಕಾರಿಯಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ "ಆಧುನಿಕ ರಾಬರ್ಟ್ ಕ್ಲೈವ್" ಎಂದು ಜರಿದರು.
ಭಾರತದ ಮಾನ ಹರಾಜು ಹಾಕಿದ ಕಾಂಗ್ರೆಸ್
ಬೆಂಗಳೂರಿನ ವಿಧಾನಸಭೆ ಕ್ಷೇತ್ರ್ಗಳ ಪ್ರಮುಖರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಾಧ್ಯಕ್ಷ ಅಮಿತ್ ಶಾ "ಕೇಸರಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎನ್ನುವ ಪದ ಪ್ರಯೋಗವನ್ನು ಕಾಂಗ್ರೆಸ್ ಕೆಲ ವರ್ಷಗಳಿಂದಲೂ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಜಾಗತಿಕವಾಗಿ ಭಾರತದ ಮಾನ ಹರಾಜು ಹಾಕಿದೆ" ಎಂದರು.
"ಭಯೋತ್ಪಾದನೆಗೆ ಯಾವ ಧರ್ಮದ ಚೌಕಟ್ಟಿಲ್ಲ. ಆದರೆ ಕಾಂಗ್ರೆಸ್ ಕೇಸರಿ ಭಯೋತ್ಪಾದನೆ ಎನ್ನುವ ಮೂಲಕ ಹಿಂದುಗಳನ್ನು ಗುರಿಯಾಗಿಸಿ ಟೀಕಿಸುತ್ತಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಪದವನ್ನು ಬಳಕೆ ಮಾಡಿದ್ದಾರೆ.
"ಅಂದು ಸಂಸತ್ತಿನಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದ ಕಾಲದಲ್ಲಿ ಪ್ರಧಾನಿ ರಾಜೀವ್ ಗಾಂಧಿ ನಮ್ಮನ್ನು ಕಂಡು ಹಾಸ್ಯ ಮಾಡುತ್ತಿದ್ದರು. ಆದರೆ ಇಂದು ಬಿಜೆಪಿ ಸಂಸತ್ತಿನಲ್ಲಿ ಬಹುಮತ ಹೊಂದಿದೆ, ಹತ್ತೊಂಭತ್ತು ರಾಜ್ಯಗಳು, ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿದೆ" ಅಮಿತ್ ಶಾ ಹೇಳಿದರು..
ಅಮಿತ್ ಶಾ ಆಗಮನಕ್ಕೆ ಮುನ್ನ ಬಸವೇಶ್ವರ ಪ್ರತಿಮೆ ಬಳಿ ಸೇರಿದ್ದ ಲಿಂಗಾಯತ ಮಹಾಸಭಾ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕುಎಂದು ಒತ್ತಾಯಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos