ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಿನ್ನಡೆಯಾಗಿದೆ.
ಆರೋಪಿ ಎನ್ನಲಾಗಿರುವ ಕೆ.ಟಿ.ನವೀನ್ಕುಮಾರ್ ಮಂಪರು ಪರೀಕ್ಷೆಗೆ ಒಳಗಾಗಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ತಿರುವು ಪಡೆದುಕೊಂಡಿದೆ.
ಇತ್ತೀಚೆಗೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಮಂಪರು ಪರೀಕ್ಷೆ ನಡೆಸಲು ಎಸ್ಐಟಿ ಅಧಿಕಾರಿಗಳು ಕೋರಿದ್ದರು. ನವೀನ್ಕುಮಾರ್ ಕೂಡ ಮಂಪರು ಪರೀಕ್ಷೆಗೆ ನ್ಯಾಯಾಲಯದಲ್ಲೇ ಒಪ್ಪಿಗೆ ಸೂಚಿಸಿದ್ದ. ಮಂಪರು ಪರೀಕ್ಷೆ ನಡೆಸಲು ಎಸ್ಐಟಿ ಅಧಿಕಾರಿಗಳು ಏ.15ರಂದು ಆತನನ್ನು ಗುಜರಾತ್ನಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಇದೀಗ ಆತ ಮಂಪರು ಪರೀಕ್ಷೆಗೆ ಒಪ್ಪದಿರುವುದರಿಂದ ಬೆಂಗಳೂರಿಗೆ ವಾಪಸ್ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಂಪರು ಪರೀಕ್ಷೆಯಲ್ಲಿ ಹೊಸ ಅಂಶಗಳು ಬೆಳಕಿಗೆ ಬರುವ ನಿರೀಕ್ಷೆ ಇತ್ತು. ಆದರೆ ನವೀನ್ಕುಮಾರ್ ಪರೀಕ್ಷೆ ಬೇಡ ಎಂದು ಹೇಳುವುದರ ಜತೆಗೆ ಲಿಖಿತ ಹೇಳಿಕೆಯನ್ನೂ ನೀಡಿದ್ದಾನೆ. ಆರೋಪಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪರೀಕ್ಷೆಯ ನಿರ್ಧಾರವನ್ನು ಕೈಬಿಟ್ಟು ವಾಪಸ್ ಕರೆದು ಕೊಂಡು ಬರಲಾಗಿದೆ.