ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ಉತ್ತರ ಕರ್ನಾಟಕ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶಾಂತಿಯುತ ಮಾತುಕತೆ
ಬೆಂಗಳೂರು: ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ಉತ್ತರ ಕರ್ನಾಟಕ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶಾಂತಿಯುತ ಮಾತುಕತೆ ನಡೆಸಿ ಭರವಸೆಗಳನ್ನು ನೀಡಿದ್ದು, ಭರವಸೆಗಳ ನಡುವೆಯೂ ಆಗಸ್ಟ್ 2 ರಂದು ಬಂದ್ ಆಚರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಾಯಕರು ಮುಖ್ಯಮಂತ್ರಿಗಳ ಭರವಸೆಗಳನ್ನು ಸ್ವಾಗತಿಸಿದ್ದಾರೆ. ಆದರೂ, ಬಂದ್ ಕರೆಯನ್ನು ಹಿಂಪಡೆಯಲು ನಿರಾಕರಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಜನರ ಆಗ್ರಗಳಿಗಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ 15 ದಿನಗಳೊಳಗಾಗಿ ಮುಖ್ಯಮಂತ್ರಿಗಳು ಶಾಸಕರೊಂದಿಗೆ ಸಭೆಯನ್ನು ನಡೆಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಸೋಮಶೇಖರ್ ಕೊತ್ತಂಬಿ ಮಾತನಾಡಿ, ಪ್ರತ್ಯೇಕ ರಾಜ್ಯದ ಕೂಗು ಈಗಿನ ಸರ್ಕಾರದ ವಿರುದ್ಧವಲ್ಲ. 2007 ಇಸವಿಯಿಂದ ಈಚೆಗೆ ನಡೆಯುತ್ತಿದೆ. ಉತ್ತರ ಕರ್ನಾಟಕಕ್ಕೆ ಪ್ರೀತಿನಿಧ್ಯ ಕೊಡಿ. ಸುವರ್ಣಸೌಧವನ್ನು ಕಟ್ಟಿಸಿದ್ದೀರಾ. ಆದರೆ, ಅದು ನಿಷ್ಕ್ರಿಯವಾಗಿದೆ. ಅಧಿಕಾರ ವಿಕೇಂದ್ರೀಕರಣಗೊಳಿಸಿ ಎಂದು ಮನವಿ ಮಾಡಿಕೊಂಡರು.
ಉತ್ತರ ಕರ್ನಾಟಕದ ಎಲ್ಲಾ ಸಮುದಾಯಗಳು ಬಂದ್'ಗೆ ಕರೆ ನೀಡಿವೆ. ಹೀಗಾಗಿ ಎಲ್ಲರೊಂದಿಗೂ ಮಾತುಕತೆ ನಡೆಸಬೇಕಿದೆ. ಮುಖ್ಯಮಂತ್ರಿಗಳ ಭರವಸೆಗಳು ನಮಗೆ ಸಂತಸವನ್ನು ತಂದಿದೆ. ಆದರೆ, ಬಂದ್ ನಿರ್ಧಾರ ಕುರಿತಂತೆ ಯಾವುದೇ ಬದಲಾವಣೆಗಳಿಲ್ಲ. ಬಂದ್ ಕರೆ ಕುರಿತಂತೆ ಶೀಘ್ರದಲ್ಲಿಯೇ ಘೋಷಣೆಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.