ನವದೆಹಲಿ: ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕವೇ ಅಚ್ಚುಮೆಚ್ಚು ಎಂಬ ಸಂಗತಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ ಆರ್ಡಿ) ನಡೆಸಿರುವ 2017-18ನೇ ಸಾಲಿನ ಅಖಿಲ ಭಾರತೀಯ ಉನ್ನತ ಶಿಕ್ಷಣ ಸಮೀಕ್ಷಾ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ವಿದೇಶಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವ್ಯಾಸಂಗ ಮಾಡುಲ ಹೆಚ್ಚು ಇಷ್ಟ ಪಡುತ್ತಾರೆ ಎಂದು ತಿಳಿದುಬಂದಿದೆ. ದೇಶಾದ್ಯಂತ ಒಟ್ಟು 46,144 ವಿದೇಶಿಗರು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಕರ್ನಾಟಕದಲ್ಲಿ 12,041 ವಿದ್ಯಾರ್ಥಿಗಳಿದ್ದಾರೆ. ಉತ್ತರಪ್ರದೇಶದಲ್ಲಿ 4,465, ಮಹಾರಾಷ್ಟ್ರದಲ್ಲಿ 4,306, ಪಂಜಾಬ್ ನಲ್ಲಿ 3,775, ತಮಿಳುನಾಡಿನಲ್ಲಿ 3,532 ವಿದೇಶಿ ವಿದ್ಯಾರ್ಥಿಗಳಿದ್ದಾರೆ.
ಕಳೆದ 2 ವರ್ಷಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. 2016-17ರಲ್ಲಿ 13,050 ಮತ್ತು 2015-16ರಲ್ಲಿ 12,348 ವಿದ್ಯಾರ್ಥಿಗಳಿದ್ದರು. ಉನ್ನತ ಶಿಕ್ಷಣ ಇಲಾಖೆ ಪದವಿ, ವೃತ್ತಿಪರ, ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಸಂಶೋಧನಾ ನಿರತವಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಈ ವರದಿ ರೂಪಿಸಲಾಗಿದೆ.
ಕಡಿಮೆ ವೆಚ್ಚದಲ್ಲಿ ಶಿಕ್ಷಣ ದೊರೆಯುತ್ತಿರುವುದೇ ವಿದ್ಯಾರ್ಥಿಗಳಿಗೆ ಕರ್ನಾಟಕದ ಮೋಹ ಹೆಚ್ಚಲು ಕಾರಣ. ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಡಿಮೆ ವೆಚ್ಚದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದಾಗಿದೆ. ವಸತಿ ಸೌಲಭ್ಯ ವೆಚ್ಚ ಕೂಡ ಕಡಿಮೆ ಇದೆ. ರಾಜ್ಯದಲ್ಲಿ 15 ವಿವಿಧ ಕೋರ್ಸ್ ಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಂಜಿನಿಯರಿಂಗ್, ಬಿಬಿಎ, ಬಿಎ ಕೋರ್ಸ್ ಗಳಲ್ಲಿ ಹೆಚ್ಚಿನ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಸಾ ಅವಧಿ ಮುಗಿದರೂ ಠಿಕಾಣಿ ಹೂಡಿರುವ ವಿದೇಶಿ ವಿದ್ಯಾರ್ಥಿಗಳು
ಇನ್ನು ಕರ್ನಾಟಕದಲ್ಲಿ ವ್ಯಾಸಂಗದ ನೆಪದಲ್ಲಿ ಬಂದು ವ್ಯಾಸಂಗದ ನಂತರವೂ ಇಲ್ಲೇ ಠಿಕಾಣಿ ಹೂಡುವವರ ಸಂಖ್ಯೆಯೂ ಹೆಚ್ಚು ಎಂದು ವರದಿಯಿಂದ ತಿಳಿದುಬಂದಿದೆ. ವಿದ್ಯಾರ್ಥಿ ವೀಸಾ ಪಡೆದುಕೊಂಡು ವ್ಯಾಸಂಗಕ್ಕೆ ಬರುವವರ ಪೈಕಿ ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಉಂಟು. ಇತ್ತೀಚೆಗೆ ರಾಜ್ಯ ಪೊಲೀಸ್ ಅಧಿಕಾರಿಗಳು 900ಕ್ಕೂ ಅಧಿಕ ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿದ್ದರು.
ಒಟ್ಟಾರೆ ವಿದೇಶಿ ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ನೇಪಾಳದವರಾಗಿದ್ದಾರೆ. ನೇಪಾಳ ಶೇ.24.9, ಆಫ್ತಾನಿಸ್ತಾನ ಶೇ.9.5, ಸುಡಾನ್ ಶೇ.4.8, ಭೂತಾನ್ ಶೇ.4.3 ಮತ್ತು ನೈಜೀರಿಯಾದ ಶೇ.4.05 ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ. 2016-17ರಲ್ಲಿ ಶೇ.23.6 ನೇಪಾಳ ವಿದ್ಯಾರ್ಥಿಗಳು ರಾಜ್ಯದಲ್ಲಿದ್ದರು. ಒಟ್ಟಾರೆ ರಾಜ್ಯದಲ್ಲಿ 166 ದೇಶಗಳ ವಿದ್ಯಾರ್ಥಿಗಳಿದ್ದಾರೆ. ಶೇ.77.4 ವಿದ್ಯಾರ್ಥಿಗಳು ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.