ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಸರಗಳ್ಳರ ಹಾವಳಿ ವಿಪರೀತವಾಗಿದೆ. ಇದು ಪೋಲೀಸ್ ಇಲಾಖೆಗೆ ಸಹ ತಲೆನೋವಾಗಿದ್ದು ಕಳ್ಳರ ಹಿಡಿಯಲು ಅವರು ನಾನಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದರೊಡನೆಯೇ ಸರಗಳ್ಳರ ಕುರಿತು ಜನ ಜಾಗೃತಿ ಮೂಡಿಸಲು ಸಹ ಅವರು ಮುಂದಾಗಿದ್ದಾರೆ. ಇದೀಗ ಈ ನಿಟ್ಟಿನಲ್ಲಿ ನಗರದ ಬೈಯಪ್ಪನಹಳ್ಳಿ ಪೋಲೀಸ್ ಕಾನ್ಸ್ಟೆಬಲ್ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಬೈಯಪ್ಪನಹಳ್ಳಿ ಠಾಣೆ ಪೋಲೀಸ್ ಕಾನ್ಸ್ಟೆಬಲ್ ಸುಬ್ರಮಣ್ಯ ಶಾನುಭೋಗ ಸರಗಳ್ಳರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ತಾವು ಖುದ್ದು ಹಾಡೊಂದನ್ನು ರಚಿಸಿಹಾಡಿರುವುದಲ್ಲದೆ ಅದನ್ನು ಯುಟ್ಯೂಬ್ ನಲ್ಲಿ ಅಪ್ ಮಾಡಿದ್ದಾರೆ.
ಸುಬ್ರಮಣ್ಯ ಈ ಹಾಡನ್ನು ತಾವೇ ಖುದ್ದಾಗಿ ರಚಿಸಿ ಹಾಡಿದ್ದು ಆಗಸ್ಟ್ 15ರಂದು ಇದನ್ನು ಯೂಟ್ಯೂಬ್ ಗೆ ಹಾಕಿದ್ದಾರೆ. ಚಲನಚಿತ್ರ ಸಂಗೀತ ಸಂಯೋಜಕರಾದ ಬಿ.ಆರ್ ಹೇಮಂತ್ ಕುಮಾರ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಬೈಯ್ಯಪ್ಪನಹಳ್ಳಿ ಠಾಣೆ ಸಿಬ್ಬಂದಿಗಳು, ಹಿರಿಯ ನಾಗರಿಕರ ವೇದಿಕೆ ಸದಸ್ಯರು, ಕೃಷ್ಣಯ್ಯನಪಾಳ್ಯ ಸರಕಾರಿ ಶಾಲೆ ಮಕ್ಕಳು ಸಹ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
"ಸಾಮಾನ್ಯವಾಗಿ ಸರಗಳ್ಳರ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರ ಹಂಚುವ ಕೆಲಸ ಮಾಡುತ್ತಾರೆ, ಆದರೆ ಈ ಕುರಿತು ಹೊಸ ಮಾದರಿಯಲ್ಲಿ ಪ್ರಯತ್ನಿಸುವ ಕುರಿತು ಪೊಲೀಸ್ ಆಯುಕ್ತರು ಸಲಹೆ ನೀಡುತ್ತಿದ್ದರು ಇದರಂತೆ ಈ ಗೀತೆ ರಚಿಸಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದೇನೆ.ಇದನ್ನು ನೋಡಿಯಾದರೂ ಜನ ಜಾಗೃತರಾದರೆ ನನ್ನ ಪ್ರಯತ್ನ ಸಾರ್ಥಕವಾಗಲಿದೆ" ಪೇದೆ ಸುಬ್ರಮಣ್ಯ ಹೇಳಿದ್ದಾರೆ.
ಪೇದೆಯ ಹಾಡು ಬೆಂಗಳೂರಿನ ನಗರ ಪೊಲೀಸ್ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. .